ಗಜೇಂದ್ರಗಡ: ಬಿಸಿಲು–ಗಾಳಿ, ಮಳೆ–ಚಳಿ, ಹಗಲು–ರಾತ್ರಿ, ನೋವು–ನಲಿವು, ಹಬ್ಬ–ಹರಿದಿನ, ಬಿಡುವು–ವಿಶ್ರಾಂತಿ ಇದ್ಯಾವುದನ್ನೂ ಲೆಕ್ಕಿಸದೆ ಜಲ್ಲಿಕಲ್ಲನ್ನು ಒಡೆಯುವುದರ ಮೂಲಕ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದಾರೆ ರೋಣ ತಾಲ್ಲೂಕಿನ ಗಜೇಂದ್ರಗಡ ನಗರದ ಭೋವಿ ಸಮುದಾಯದ ಮಹಿಳೆಯರು.
ಬದುಕಿನುದ್ದಕ್ಕೂ ಶಾಪದಂತೆ ಬೆನ್ನಿ ಗಂಟಿಕೊಂಡಿರುವ ಅನಕ್ಷರತೆ, ಬಡತನ ವನ್ನು ಎದುರಿಸುತ್ತಾ ಸುತ್ತಿಗೆಯಿಂದ ದೊಡ್ಡ ಗಾತ್ರದ ಕಲ್ಲುಗಳನ್ನು 20ಮಿ.ಮೀ, 40 ಮಿಮೀ ಗಾತ್ರಕ್ಕೆ ಮಾರ್ಪಡಿಸಿ ಮಾರಾಟ ಮಾಡುವ ಮೂಲಕ ಸಂಸಾರ ಸಾಗಿಸುತ್ತಿದ್ದಾರೆ.
ಹಸುಳೆಗಳನ್ನು ಮಡಿಲಲ್ಲಿಟ್ಟು ಕೊಂಡು ಬಿಸಿಲು–ಗಾಳಿಯನ್ನು ಲೆಕ್ಕಿಸದೆ ಸ್ವಾಭಿ ಮಾನಿ ಬದುಕು ಸಾಗಿಸುತ್ತಿರುವ ಇವರಿಗೆ ಈ ಕಸುಬು ಹಿರಿಯರಿಂದ ಬಂದಿರುವ ಬಳುವಳಿಯಾಗಿದೆ. ಸೂರ್ಯೋದಯವಾಗುತ್ತಿದ್ದಂತೆಯೇ ಜಲ್ಲಕಲ್ಲು ಒಡೆಯುವ ಕಾಯಕಕ್ಕೆ ಮುಂ ದಾಗುವ ಈ ಮಹಿಳಾ ಕಾರ್ಮಿಕರು ಬೆಳಗ್ಗೆಯಿಂದ ಸಂಜೆ ವರೆಗೂ ರಟ್ಟೆ ಯಲ್ಲಿನ ಶಕ್ತಿಯನ್ನೆಲ್ಲಾ ಒಗ್ಗೂಡಿಸಿ ಕಲ್ಲು ಒಡೆದರೂ ದಿನಕ್ಕೆ ₨ 100 ದೊರೆ ಯದಿರುವುದು ವಿಪರ್ಯಾಸ.
ಎಲ್ಲರೂ ಅಸಂಘಟಿಕ ಕಾರ್ಮಿಕರು: ತಲೆಮಾರುಗಳಿಂದಲೂ ಜಲ್ಲಿಕಲ್ಲು ಒಡೆ ಯುತ್ತಾ ಬಂದಿರುವ ಗಜೇಂದ್ರಗಡದ ಮಹಿಳಾ ಜಲ್ಲಿಕಲ್ಲು ಒಡೆಯುವ ಕಾರ್ಮಿಕರು ಇಂದಿಗೂ ಅಸಂಘಟಿತರೇ. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ತೀರಾ ಹಿಂದುಳಿದ ಇವರುಗಳಿಗೆ ಹೊರಗಿನ ಪ್ರಪಂಚದ ಕನಿಷ್ಠ ಪ್ರಜ್ಞೆ ಇಲ್ಲದಿರುವುದೇ ಸಂಘಟಿತ ಕಾರ್ಮಿಕರಾಗಲು ಸಾಧ್ಯವಾಗದೇ ಇರಲು ಪ್ರಮುಖ ಕಾರಣ ಎನ್ನಲಾಗು ತ್ತಿದೆ.
ವ್ಯವಹಾರ ಜ್ಞಾನವಿಲ್ಲದ ಈ ಮಹಿಳಾ ಕಾರ್ಮಿಕರುಗಳು ಬೆಳಗ್ಗೆ ಯಿಂದ ಸಂಜೆವರೆಗೂ ಕಷ್ಟಪಟ್ಟು ದುಡಿಯುವುದನ್ನು ಹೊರತು ಪಡಿಸಿ ದರೆ ಪರಿಶ್ರಮದಿಂದ ತಯಾರಿಸಿದ ಜಲ್ಲಿಕಲ್ಲುಗಳನ್ನು ಹೇಗೆ ಮಾರಾಟ ಮಾಡಬೇಕು. ಎಷ್ಟು ದರಕ್ಕೆ ಮಾರಾಟ ಮಾಡಬೇಕು. ಇಂದಿನ ಬೆಲೆ ಏರಿಕೆ ಮಧ್ಯೆಯೂ ಜಲ್ಲಿಕಲ್ಲಿಗೆ ದರವನ್ನು ಹೇಗೆ ನಿಗದಿ ಪಡಿಸಬೇಕು ಎಂಬಿತ್ಯಾದಿ ಕನಿಷ್ಠ ಪ್ರಜ್ಞೆಯೂ ಇವರಿಗಿಲ್ಲ.
ಕಾಯಿಲೆಗಳ ಭೀತಿ: ಜಲ್ಲಿಕಲ್ಲು ತಯಾರಿ ಕೆಯಿಂದಾಗಿ ಕಾರ್ಮಿಕರಿಗೆ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಸಾಮಾನ್ಯವಾ ಗಿವೆ. ಕಲ್ಲನ್ನು ಒಡೆಯುವಾಗ ಎಷ್ಟೋ ಕಾರ್ಮಿಕರು ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. ದೇಹದ ನಾನಾ ಭಾಗಗಳು ಊನವಾಗಿವೆ. ಇಷ್ಟೊಂದು ಅಪಾಯಕಾರಿ ಪರಿಶ್ರಮದ ವೃತ್ತಿಯನ್ನೇ ನೆಚ್ಚಿಕೊಂಡಿರುವ ಇಲ್ಲಿನ ಜಲ್ಲಿಕಲ್ಲು ತಯಾರಿಸುವ ಮಹಿಳಾ ಕಾರ್ಮಿಕರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇದುವರೆಗೂ ಯಾವುದೇ ಸೌಲಭ್ಯ ಒದಗಿಸಿಲ್ಲ.
ಸಮರ್ಪಕ ಆಸರೆ ವ್ಯವಸ್ಥೆ, ಆರ್ಥಿಕ ನೆರವು ಇವರುಗಳಿಗೆ ಮರಿಚೀಕೆಯಾ ಗಿಯೇ ಉಳಿದಿವೆ. ನಗರದ ದುರ್ಗಾದೇವಿ ದೇವಸ್ಥಾನದ ಪಕ್ಕದಲ್ಲಿನ ರಸ್ತೆಯ ಅಕ್ಕ–ಪಕ್ಕದಲ್ಲಿ ಜಲ್ಲಿಕಲ್ಲು ತಯಾರಿಸುವ ಇವರುಗಳಿಗೆ ಸ್ಥಳೀಯ ಆಡಳಿತ ಸಂಚಾರಕ್ಕೆ ಅಡೆ–ತಡೆ ಉಂಟಾಗುತ್ತದೆ ಕಲ್ಲುಗಳನ್ನು ಬೇರೆಡೆ ಹಾಕಿಕೊಳ್ಳಿ ಎಂದು ತಗಾದೆ ತೆಗೆಯುತ್ತಿದೆ. ಇದರಿಂದಾಗಿ ಈ ಮಹಿಳಾ ಕಾರ್ಮಿಕರು ಮಾನಸಿಕ ವಾಗಿಯೂ ಕುಗ್ಗಿ ಹೋಗಿದ್ದಾರೆ. ಸರ್ಕಾರ ಸೂಕ್ತ ಮೂಲ ಸೌಲಭ್ಯ ಒದಗಿಸಿ ಎಲ್ಲರಂತೆ ಬದುಕು ಸಾಗಿಸಲು ಅನುವಾಗಲಿ ಎನ್ನುವುದು ಇವರ ಆಶಯವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.