ಒಂದು ದಂತಕಥೆಯಂತೆ ಸಂತ ಶಿಶುವಿನಾಳದ ಸಂತ ಶರೀಫ ಸಾಹೇಬರು ಒಮ್ಮೆ ಲಕ್ಷ್ಮೇಶ್ವರಕ್ಕೆ ಬಂದಾಗ ಕೋಡಿಯಲ್ಲಮ್ಮನ ದರ್ಶನಕ್ಕಾಗಿ ದೇವಸ್ಥಾನಕ್ಕೆ ಬಂದಿದ್ದರಂತೆ. ಆಗ ಅಲ್ಲಿ ನೂರಾರು ಭಕ್ತರು ನೆರೆದಿದ್ದರು. ಅಂದು ಕರಾಳ ಅಮವಾಸ್ಯೆ. ಚಿಲುಮೆಯ ನಶೆಯಲ್ಲಿದ್ದ ಶರೀಫರು, ‘ತಾಯಿ ಕೋಡಿಯಲ್ಲಮ್ಮ, ಪೂರ್ಣ ಹುಣ್ಣಿಮೆಯೆಂದು ನಿನ್ನ ದರ್ಶನ ಪಡೆದು ನನ್ನ ಜೀವನ ಪಾವನವಾಯಿತು’ ಎಂದರಂತೆ. ಆಗ ಅಲ್ಲಿ ಸೇರಿದ್ದ ಭಕ್ತರು ಶರೀಫರ ಈ ಮಾತನ್ನು ಕೇಳಿದಾಕ್ಷಣ ಕೋಪಗೊಂಡು ಕುಡುಕ ಶರೀಫರಿಗೆ ಸರಿಯಾದ ಪಾಠ ಕಲಿಸಬೇಕು ಎಂದು ನಿರ್ಧರಿಸಿ, ‘ಶರೀಫ ಸಾಹೇಬರೇ! ಇಂದು ಅಮವಾಸ್ಯೆ. ಹುಣ್ಣಿಮೆ ಎಲ್ಲಿಂದ ಬಂತ್ರೀ. ಹಂಗಾರ ಈವತ್ತ ನೀವು ನಮಗ ಚಂದ್ರಮನ ತೋರಿಸಿರಿ’ ಎಂದು ಪಟ್ಟು ಹಿಡಿದರಂತೆ.