ಸಾಗರ: ಇಲ್ಲಿನ ಮಹಾಗಣಪತಿ ದೇವರ ರಥೋತ್ಸವದ ನಂತರ ರಥದಲ್ಲಿರುವ ಗಣಪತಿಯ ಉತ್ಸವ ಮೂರ್ತಿಯನ್ನು ಸಮೀಪದಿಂದ ದರ್ಶನ ಮಾಡಲು ಅವಕಾಶ ಕಲ್ಪಿಸುವ ಸಲುವಾಗಿ ಸ್ಟೀಲ್ ಓವರ್ ಬ್ರಿಡ್ಜ್ ನಿರ್ಮಾಣ ಮಾಡಲು ಟೆಂಡರ್ ಕರೆಯುವಂತೆ ಶಾಸಕ ಎಚ್. ಹಾಲಪ್ಪ ಹರತಾಳು ಅಧಿಕಾರಿಗಳಿಗೆ ಸೂಚಿಸಿದರು.
ಮಾರ್ಚ್ 28ರಿಂದ ನಡೆಯಲಿರುವ ಮಹಾಗಣಪತಿ ಜಾತ್ರೋತ್ಸವಅಂಗವಾಗಿ ಶನಿವಾರ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ‘ಈ ಬಾರಿ ಗಣಪತಿ ಜಾತ್ರೆಯನ್ನು ಮಾರಿಕಾಂಬಾ ಜಾತ್ರೆ ಮಾದರಿಯಲ್ಲೇ ಎಲ್ಲರ ಸಲಹೆ ಪಡೆದು ಅರ್ಥಪೂರ್ಣವಾಗಿ ಆಚರಿಸಲಾಗುವುದು’ ಎಂದು ತಿಳಿಸಿದರು.
ಗಣಪತಿ ಜಾತ್ರೆಗೆ ಪ್ರತಿವರ್ಷ ಮುಜರಾಯಿ ಇಲಾಖೆಯಿಂದ ₹ 7 ಲಕ್ಷ ನೀಡಲಾಗುತ್ತಿದೆ. ಮಳಿಗೆ ಹರಾಜು ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಂದ ಸುಮಾರು ₹ 25 ಲಕ್ಷ ಸಂಗ್ರಹವಾಗುತ್ತಿದೆ. ಈ ಬಾರಿ ಜಾತ್ರೆಗೆ ₹ 25 ಲಕ್ಷ ಅನುದಾನ ನೀಡುವಂತೆ ಮುಜರಾಯಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಗಣಪತಿ ಜಾತ್ರೆಯಲ್ಲಿ ಸುತ್ತಮುತ್ತಲಿನ ಪರಿಸರವನ್ನು ಚೊಕ್ಕಟವಾಗಿಡುವಂತೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳು ನಿಗಾ ವಹಿಸಬೇಕು. ಪ್ರತಿವರ್ಷದಂತೆ ಈ ವರ್ಷವೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ನಗರಸಭೆ ಸದಸ್ಯ ಟಿ.ಡಿ. ಮೇಘರಾಜ್, ಪೌರಾಯುಕ್ತ ಎಸ್.ರಾಜು, ಮೆಸ್ಕಾಂ ಎಂಜಿನಿಯರ್ ಚಂದ್ರಶೇಖರ್ ಇದ್ದರು.