ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ: ಚುರುಕುಗೊಂಡ ಆಲೂಗಡ್ಡೆ ಬಿತ್ತನೆ

ಈ ವರ್ಷ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಸಾಧ್ಯತೆ
ಸಂತೋಷ್‌ ಸಿ.ಬಿ.
Published 30 ಮೇ 2024, 4:57 IST
Last Updated 30 ಮೇ 2024, 4:57 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಆಲೂಗಡ್ಡೆ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಬಿತ್ತನೆಗೆ ಪೂರಕ ವಾತಾವರಣ ನಿರ್ಮಾಣವಾಗಿದೆ. ರೈತರು‌ ಜಮೀನನ್ನು ಹದಗೊಳಿಸಿ, ಆಲೂಗಡ್ಡೆ ಬಿತ್ತನೆ ಕಾರ್ಯ ಮಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.

ಕಳೆದ ಬಾರಿ ಜಿಲ್ಲೆಯಲ್ಲಿ 3,600 ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆ ಮಾಡಲಾಗಿತ್ತು. ಮುಂಗಾರು ಪ್ರವೇಶ ಹಿನ್ನಡೆ ಹಾಗೂ ಬರ ಪರಿಸ್ಥಿತಿಯಿಂದಾಗಿ ಆಲೂಗಡ್ಡೆ ಬಿತ್ತನೆ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ. ಆಲೂಗಡ್ಡೆ ಬದಲಾಗಿ ಶುಂಠಿ, ಜೋಳ ಸೇರಿದಂತೆ ಇತರೆ ಬೆಳೆಗಳ ಕಡೆ ರೈತರು ಮುಖ ಮಾಡಿದ್ದು, ಆಲೂ ಗೆಡ್ಡೆ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

ಜಿಲ್ಲೆಯಲ್ಲಿ ಈಗಾಗಲೇ ಬಹುತೇಕ ತಾಲ್ಲೂಕಿನಲ್ಲಿ ಶುಂಠಿ ಬಿತ್ತನೆ ಕಾರಣ ಆಲೂಗಡ್ಡೆ ಬಿತ್ತನೆಗೆ ಆಸಕ್ತಿ ಕಡಿಮೆಯಾಗಿದೆ ಎನ್ನಲಾಗುತ್ತಿದೆ.

ಜಿಲ್ಲೆಯ ಚನ್ನರಾಯಪಟ್ಟಣ ಅರಸೀಕೆರೆ, ಆಲೂರು, ಹಾಸನ, ಅರಕಲಗೂಡು, ಬೇಲೂರು ತಾಲ್ಲೂಕಿನಲ್ಲಿ ಆಲೂಗಡ್ಡೆ ಬಿತ್ತನೆ ಕಾರ್ಯ ಪ್ರಾರಂಭವಾಗಿದ್ದು, ರೈತರು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.

‘ಪ್ರತಿವರ್ಷ ಆಲೂಗಡ್ಡೆಯನ್ನು ಬೆಳೆಯುತ್ತಿದ್ದು ಉತ್ತಮ ಇಳುವರಿ ಕಾಣುತ್ತಿದ್ದೆವು. ಪ್ರತಿ ಬಾರಿಯೂ ಮೇ ಮೊದಲ ವಾರದಲ್ಲಿ ಬಿತ್ತನೆ ಆರಂಭಿಸುತ್ತಿದ್ದೆವು. ಆದರೆ ಮಳೆಯ ವಿಳಂಬದಿಂದ ಮೇ ಕೊನೆಯ ವಾರದಲ್ಲಿ ಬಿತ್ತನೆ ಆರಂಭಿಸಿದ್ದೇವೆ’ ಎನ್ನುತ್ತಾರೆ ಹಾಸನ ತಾಲ್ಲೂಕು ದುದ್ದ ಹೋಬಳಿಯ ಬಿಟ್ಟಹಳ್ಳಿಯ ದೊಡ್ಡಣ್ಣ.

45 ಸಾವಿರ ಹೆಕ್ಟೇರ್‌ನಿಂದ 4 ಸಾವಿರ ಹೆಕ್ಟೇರ್‌: ಕೆಲ ದಶಕಗಳ ಹಿಂದೆ ಜಿಲ್ಲೆಯಲ್ಲಿ 45ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಆಲೂಗಡ್ಡೆಯನ್ನು ಬೆಳೆದು ರೈತರು ಲಾಭ ಗಳಿಸುತ್ತಿದ್ದರು.

ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ತರುವ ಬೆಳೆ ಇದಾಗಿದ್ದು, ಕೇವಲ ಮೂರು ತಿಂಗಳಲ್ಲಿಯೇ ಕೊಯ್ಲು ಮಾಡಬಹುದಾದ ಬೆಳೆಯಾಗಿದೆ. ಕಾಲ ಕಳೆದಂತೆ ಹವಾಮಾನ ವೈಪರಿತ್ಯ ಹಾಗೂ ಅಂಗಮಾರಿ ರೋಗದ ಕಾರಣ ಆಲೂಗಡ್ಡೆ ಬೆಳೆಯುವುದು ಜೂಜಾಟದಂತಾಗಿ ರೈತರು ನಷ್ಟ ಅನುಭವಿಸುವಂತಾಯಿತು.

ಇಳುವರಿಯೊಂದಿಗೆ ಗಡ್ಡೆಯ ಗಾತ್ರ ಹೆಚ್ಚಾಗಿದ್ದರಿಂದ ಇಲ್ಲಿ ಬೆಳೆಯುವ ಆಲೂಗಡ್ಡೆಗೆ ವಿಶೇಷ ಮನ್ನಣೆಯೂ ಇತ್ತು. ಚಿಪ್ಸ್ ಮಾರುಕಟ್ಟೆ ಹಾಗೂ ಇತರೆ ಕಂಪನಿಗಳು ಆಲೂಗಡ್ಡೆಯನ್ನು ಖರೀದಿಸುತ್ತಿದ್ದವು. ಆದರೆ ಬದಲಾದ ಹವಾಮಾನ, ಅಂಗಮಾರಿ ರೋಗದಿಂದಾಗಿ ಇಲ್ಲಿನ ರೈತರು ಆಲೂಗಡ್ಡೆ ಬೆಳೆಗೆ ಹಿಂದೇಟು ಹಾಕಿದರು. ಜಿಲ್ಲೆಯಲ್ಲಿ ಈಗ ಕೇವಲ 4 ಸಾವಿರದಿಂದ ಸಾವಿರ ಹೆಕ್ಟೇರ್‌ ದೇಶದಲ್ಲಿ ಆಲೂಗಡ್ಡೆ ಬಿತ್ತನೆ ಸಾಧ್ಯವಾಗುತ್ತಿದೆ.

ರೈತರು ಯಾವುದೇ ಬೆಳೆ ಮಾಡಲು ನಿರಾಸಕ್ತಿ ತೋರುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕೂಲಿ ಕಾರ್ಮಿಕರ ಕೊರತೆಯೂ ರೈತರನ್ನು ಕಂಗೆಡಿಸಿದೆ. ಒಂದೆಡೆ ಉತ್ತಮ ಬೆಳೆ ಬೆಳೆಯಬೇಕೆಂಬ ಆಸೆ ಇದ್ದರೆ ಕೃಷಿ ಚಟುವಟಿಕೆಗೆ ಹೆಚ್ಚಿನ ಹಣ ವ್ಯಯಿಸಬೇಕಾಗಿದೆ.

ಆಲೂಗಡ್ಡೆ ಬಿತ್ತನೆ ಮಾಡುತ್ತಿರುವ ರೈತರು
ಆಲೂಗಡ್ಡೆ ಬಿತ್ತನೆ ಮಾಡುತ್ತಿರುವ ರೈತರು

ಕೈ ತುಂಬಾ ಹಣ ನೀಡುತ್ತೇವೆ ಎಂದರೂ ಕಾರ್ಮಿಕರು ಸಿಗುತ್ತಿಲ್ಲ. ಕಾರ್ಮಿಕರು ಸಿಗದ ಕಾರಣ ಅಲ್ಪಸ್ವಲ್ಪ ಜಮೀನಿನಲ್ಲಿಯೇ ಬೆಳೆ ಬೆಳೆಯಲಾಗುತ್ತಿದೆ.

–ಆಲೂಗಡ್ಡೆ ಬಿತ್ತನೆ ಕಡಿಮೆಯಾಗಿದೆ. ಮಹೇಶ್ ರೈತ

ಎಪಿಎಂಸಿಯಲ್ಲಿ ಈಗಾಗಲೇ 3 ಸಾವಿರ ಕ್ವಿಂಟಲ್‌ನಷ್ಟು ಆಲೂಗಡ್ಡೆ ಬಿತ್ತನೆ ಬೀಜ ಮಾರಾಟವಾಗಿದ್ದು ಈ ಬಾರಿ 4 ಸಾವಿರದಿಂದ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಬಹುದು.

–ಮಂಗಳಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT