ಸಕಲೇಶಪುರ: ಆನೆ ಅರ್ಜುನನ ಸಾವಿಗೆ ಸಂಬಂಧಿಸಿದಂತೆ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಆಗ್ರಹಿಸಿದರು.
ಕಾಡಾನೆ ಸೆರೆ ಹಿಡಿಯುವ ಕಾರ್ಯಚಾರಣೆಗೆ ಅರ್ಜುನನ್ನು ಬಳಕೆ ಮಾಡಿಕೊಂಡಿದ್ದೇ ಮೊದಲ ತಪ್ಪು. 60 ವರ್ಷ ದಾಟಿದ ಆನೆಗಳನ್ನು ಇಂತಹ ಕಠಿಣ ಕಾರ್ಯಾಚರಣೆಗೆ ಬಳಸಿಕೊಳ್ಳಬಾರದು ಎಂಬುವ ಸಾಮಾನ್ಯ ಜ್ಞಾನ ಅಧಿಕಾರಿಗಳಿಗೆ ಇಲ್ಲದೆ ಇರುವುದು ಆ ಇಲಾಖೆಯ ವೈಫಲ್ಯ ಎತ್ತಿ ತೋರಿಸುತ್ತದೆ. ಕಾಡಾನೆ ಕಾರ್ಯಾಚರಣೆ ನಡೆಸುವುದಕ್ಕೆ ನುರಿತ ತಜ್ಞರ ತಂಡವೇ ಇಲ್ಲದೆ ಏಕಾಏಕಿ ಅರ್ಜುನನ್ನು ಕಾಡಾನೆ ಹಿಡಿಯಲು ಕಳಿಸಿದ್ದೇ ಅವೈಜ್ಞಾನಿಕ. ಅರ್ಜುನನ ಸಾವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಖಂಡನೆ: ಅರ್ಜುನ ಸಾವಿನ ತನಿಖೆ ನಡೆಸುವಂತೆ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರು ಹಾಗೂ ಗ್ರಾಮಸ್ಥರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದು, ಖಂಡನೀಯ. ಅಲ್ಲದೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಪ್ರತಿಭಟನೆ ಮಾಡುವವರ ಮೇಲೆ ದಾಖಲಿಸಿರುವ ಮೊಕದ್ದಮೆಯನ್ನು ಹಿಂಪಡೆಯಬೇಕು ಎಂದರು.
ಯುವ ಜನತಾದಳ ಅಧ್ಯಕ್ಷ ಸ.ಬ. ಭಾಸ್ಕರ್, ಪುರಸಭಾ ಮಾಜಿ ಅಧ್ಯಕ್ಷ ಕಾಡಪ್ಪ, ಜೆಡಿಎಸ್ ಮುಖಂಡರಾದ ಸಚಿನ್ ಪ್ರಸಾದ್, ಆನೇಹಲ್ ಹಸೈನಾರ್ ಇದ್ದರು.