ಅರಸೀಕೆರೆ: ವಿವಿಧ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪದ ಮೇಲೆ ಅಂತರ ಜಿಲ್ಲಾ ಕಳ್ಳನನ್ನು ಬಂಧಿಸಿರುವ ನಗರ ಠಾಣೆಯ ಪೊಲೀಸರು ಆರೋಪಿಯಿಂದ ಸುಮಾರು ₹ 10 ಲಕ್ಷ ಮೌಲ್ಯದ ಕಾರು, ಆ್ಯಪೆ ಆಟೊ, ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ಹೋಬಳಿಯ ರಾಜಪುರ ಗ್ರಾಮದ ರಂಗನಾಥ ಎಂಬುವವರ ಮಗ ಮಟ್ಟನವಿಲೆ ಮಂಜ ಉರ್ಫ್ ಮಂಜುನಾಥ್ (35) ಬಂಧಿತ ಆರೋಪಿ.
ನಗರ ಪೊಲೀಸ್ ಠಾಣೆಯ ಆವರಣದಲ್ಲಿ ಸೋಮವಾರ ಡಿವೈಎಸ್ಪಿ ನಾಗೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ‘ಇತ್ತೀಚೆಗೆ ನಗರದಲ್ಲಿ ವಾಹನಗಳ ಕಳ್ಳತನಕ್ಕೆ ಸಂಬಂಧಿಸಿದಂತೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಅವರ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ಠಾಣೆ ಸಿಬ್ಬಂದಿ ಆ. 13ರಂದು ಇಲ್ಲಿಯ ರೈಲ್ವೆ ನಿಲ್ದಾಣದ ರಸ್ತೆಯ ಆರ್.ಆರ್. ಹೋಟೆಲ್ ಮುಂಭಾಗ ಅನುಮಾನಾಸ್ಪದವಾಗಿ ಯುವಕನೊಬ್ಬ ಬೈಕ್ ಸ್ಟಾರ್ಟ್ ಮಾಡುತ್ತಿರುವದನ್ನು ನೋಡಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಿಸಿದಾಗ ಹಲವು ವಾಹನ ಕಳವು ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ’ ಎಂದು ತಿಳಿಸಿದರು.
‘ಆರೋಪಿಯಿಂದ ಬೆಂಗಳೂರು ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ 1 ಇಂಡಿಕಾ, 1 ಸ್ವಿಪ್ಟ್ ಕಾರು, 1 ಪಲ್ಸರ್ ಬೈಕ್, ಬೆಂಗಳೂರು ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ 1 ಕರಿಷ್ಮಾ ಬೈಕ್, 1 ರಾಯಲ್ ಎನ್ಫೀಲ್ಡ್ ಬುಲೆಟ್, ರಾಮನಗರ ಜಿಲ್ಲೆ ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯ 1 ಸ್ಪ್ಲೆಂಡರ್ ಬೈಕ್, ಅರಸೀಕೆರೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ 1 ಆ್ಯಪೆ ಗೂಡ್ಸ್ ಆಟೊ, 1 ಸ್ಪ್ಲೆಂಡರ್ ಬೈಕ್ ವಶಕ್ಕೆ ಪಡೆಯಲಾಗಿದೆ’ ಎಂದರು.
ಕಾರ್ಯಾಚರಣೆ ತಂಡದಲ್ಲಿ ಸಿಪಿಐ ಸೋಮೇಗೌಡ, ಪಿಎಸ್ಐ ತಿಮ್ಮಯ್ಯ , ಸಿಬ್ಬಂದಿ ಮಂಜೇಗೌಡ, ರಂಗಸ್ವಾಮಿ, ರಘು, ಕುಮಾರ್, ಸಂಗಪ್ಪ, ರಮೇಶ್, ಶುಭಾ, ವಾಹನ ಚಾಲಕ ನಾಗರಾಜ್, ಬೇಲೂರು ಪಿಎಸ್ಐ ಎಸ್.ಜಿ. ಪಾಟೀಲ್ ಮತ್ತು ಸಿಬ್ಬಂದಿ ಇದ್ದರು.