ಅರಸೀಕೆರೆ: ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಅರಸೀಕೆರೆ ಅಬಕಾರಿ ಪೊಲೀಸರು ಬಂಧಿತರಿಂದ ಸುಮಾರು ₹ 65 ಸಾವಿರ ಮೌಲ್ಯದ ಗಾಂಜಾ ವಶಕ್ಕೆ ಪಡೆಸಿಕೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಎಸ್.ಬಿದರೆ ಗ್ರಾಮದ ಪೃಥ್ವಿರಾಜ್ ಹಾಗೂ ಚಿಕ್ಕಮಗಳೂರು ತಾಲ್ಲೂಕಿನ ಕುರುಬರ ಬೂದಿಹಾಳ್ ಗ್ರಾಮದ ರಂಗನಾಥ ಬಂಧಿತ ಆರೋಪಿಗಳು.
‘ಆಗಸ್ಟ್ 23 ರಂದು ತಾಲ್ಲೂಕಿನ ಬಾಣಾವರ ರೈಲ್ವೆ ನಿಲ್ದಾಣದ ಬಳಿಯ ವೃತ್ತದಲ್ಲಿ ರಸ್ತೆ ಕಾವಲು ತಪಾಸಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ವೇಳೆ ಇಬ್ಬರು ಅನುಮಾನಾಸ್ಪದವಾಗಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರನ್ನು ತಡೆದು ವಿಚಾರಿಸಿದಾಗ ಪ್ರಕರಣ ಪತ್ತೆಯಾಗಿದೆ’ ಎಂದು ಮಂಗಳವಾರ ತಾಲ್ಲೂಕು ಅಬಕಾರಿ ನಿರೀಕ್ಷಕ ಎಂ.ಸಿ. ಶಂಕರ್ ಸುದ್ದಿಗಾರರೊಂದಿಗೆ ತಿಳಿಸಿದರು.
‘ಜಿಲ್ಲಾ ಅಬಕಾರಿ ಉಪ ಆಯುಕ್ತ ನಾಗೇಶ್ ಕುಮಾರ್ ಹಾಗೂ ಜಿಲ್ಲಾ ಉಪ ಅಧೀಕ್ಷಕ ಎಂ.ಎಚ್. ರಘು ಅವರ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ವೇಳೆ ತಪ್ಪು ಒಪ್ಪಿಕೊಂಡಿದ್ದಾರೆ, ಪ್ರಕರಣವನ್ನು ದಾಖಲಿಸಿಕೊಂಡು ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದರು.
ತಾಲ್ಲೂಕು ಅಬಕಾರಿ ಇಲಾಖೆಯ ಉಪನಿರೀಕ್ಷಕ ಪಿ.ಜಿ. ಜಯಕುಮಾರ್, ಸಿಬ್ಬಂದಿ ತೋಂಟದೇಶ್ ದ್ಯಾಮಪ್ಪ ಹಾಗೂ ಇತರೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.