ಆಲೂರು: ತಾಲ್ಲೂಕಿನ ರಾಯರಕೊಪ್ಪಲು ಗ್ರಾಮದ ಅಯ್ಯನಕೆರೆಯಲ್ಲಿ ನೂರಾರು ಮೀನುಗಳು ಮೃತಪಟ್ಟಿವೆ.
ಗ್ರಾಮದ ಯೋಗೇಶ್, ಸುರೇಶ್ ಎಂಬುವರು ಕೆರೆಯಲ್ಲಿ ಮೀನು ಸಾಕಣೆ ಮಾಡುತ್ತಿದ್ದಾರೆ.
‘ಮೂರು ವರ್ಷಗಳ ಹಿಂದೆ 30 ಸಾವಿರ ಮೀನು ಮರಿಗಳನ್ನು ಕೆರೆಗೆ ಬಿಟ್ಟಿದ್ದೆವು. ಶುಕ್ರವಾರ 300–500 ಮೀನುಗಳು ಮೃತಪಟ್ಟವು. ಶನಿವಾರವೂ ನೂರಾರು ಮೀನುಗಳು ಮೃತಪಟ್ಟಿವೆ. ಕೆರೆಗೆ ಯಾರೋ ವಿಷ ಬೆರೆಸಿರುವ ಸಾಧ್ಯತೆ ಇದೆ’ ಎಂದು ಯೋಗೇಶ್ ಶಂಕೆ ವ್ಯಕ್ತಪಡಿಸಿದರು.
‘ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಮನಕ್ಕೆ ತಂದಿದ್ದೇವೆ. ಕೆಂಚಮ್ಮನ ಹೊಸಕೋಟೆ ಹೊರ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ’ ಎಂದರು.
‘ಕೆರೆಯಲ್ಲಿ ನೀರು ಕಡಿಮೆಯಾಗುವ ಜತೆಗೆ ಕಲುಷಿತಗೊಂಡಿರುವ ಸಾಧ್ಯತೆ ಇದೆ. ಅನಾರೋಗ್ಯ ಸಮಸ್ಯೆಯಿಂದಾಗಿ ಸ್ಥಳಕ್ಕೆ ಭೇಟಿ ನೀಡಲು ಸಾಧ್ಯವಾಗಿಲ್ಲ. ಭಾನುವಾರ ಭೇಟಿ ನೀಡಿ ಪರಿಶೀಲಿಸುತ್ತೇನೆ’ ಎಂದು ಪಿಡಿಒ ಸಣ್ಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.