ಶ್ರವಣಬೆಳಗೊಳ: ಶ್ರವಣಬೆಳಗೊಳದ ವಿಂಧ್ಯಗಿರಿ ಬಾಹುಬಲಿ ಬೆಟ್ಟ, ಚಂದ್ರಗಿರಿ ಚಿಕ್ಕಬೆಟ್ಟ ಮತ್ತು ಪಟ್ಟಣ ವ್ಯಾಪ್ತಿಯ ಎಲ್ಲಾ ಜಿನ ಬಸದಿಗಳನ್ನು ಸರ್ಕಾರದ ಆದೇಶದಂತೆ ತೆರೆಯಲಾಗಿದ್ದು, ಯಾತ್ರಾರ್ಥಿಗಳಿಗೆ ಮತ್ತು ಪ್ರವಾಸಿಗರ ದರ್ಶನಕ್ಕೆ ಅವಕಾಶವನ್ನು ಬುಧವಾರದಿಂದ ಕಲ್ಪಿಸಲಾಗಿದೆ.
ಸರ್ಕಾರದ ಮಾರ್ಗಸೂಚಿಯಂತೆ ಕೊರೊನಾ ವೈರಸ್ ಹರಡದಂತೆ ಯಾತ್ರಿಕರು ಮತ್ತು ಪ್ರವಾಸಿಗರು ಸೂಚನಾ ಫಲಕಗಳನ್ನು ಗಮನಿಸಿ, ಅದರಂತೆ ನಡೆದುಕೊಳ್ಳಬೇಕು ಎಂದು ಮಾಹಿತಿ ಒದಗಿಸುತ್ತಿದ್ದಾರೆ.
ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮಾತ್ರ ಬೆಟ್ಟಗಳ ದರ್ಶನಕ್ಕೆ ಅವಕಾಶವಿದ್ದು, ಸೇವಾರ್ಥ ಅಭಿಷೇಕ ಪೂಜೆಗಳು, ವಸತಿ, ಉಪಾಹಾರ- ಭೋಜನ ಮತ್ತು ಡೋಲಿ ವ್ಯವಸ್ಥೆ ಇರುವುದಿಲ್ಲ ಎಂದು ಎಸ್.ಡಿ.ಜೆ.ಎಂ.ಐ.ಎಂ.ಸಿ. ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಬಾಹುಬಲಿ ಬೆಟ್ಟಕ್ಕೆ ಹತ್ತುವವರ ವಿವರಗಳನ್ನು ದಾಖಲಿಸುತ್ತಾ ಥರ್ಮಲ್ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಸರ್ ಹಾಕಿ ಸುರಕ್ಷತಾ ನಿಯಮಗಳನ್ನು ಕೈಗೊಳ್ಳಲಾಗಿದೆ. ಮೊದಲನೇ ದಿನವೇ 121 ಜನರು ಬಾಹುಬಲಿ ದರ್ಶನವನ್ನು ಪಡೆದಿದ್ದಾರೆ ಎಂದು ವ್ಯವಸ್ಥಾಪಕ ಗುಣಪಾಲ್ ತಿಳಿಸಿದ್ದಾರೆ.