ಹಿರೀಸಾವೆ: ತೇನ್ಸಿಂಗ್ ಯುವ ಸಾಹಸಿ ಸಂಘದ ವತಿಯಿಂದ ಶನಿವಾರ ಕೋವಿಡ್–19 ಜಾಗೃತಿ ಮೂಡಿಸಲು ನೇಪಾಳಕ್ಕೆ ಹೊರಟ ಬೈಕ್ ರ್ಯಾಲಿಗೆ ಶಾಸಕ ಸಿ.ಎನ್. ಬಾಲಕೃಷ್ಣ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕರು, ‘ದೇಶದ ವಿವಿಧ ರಾಜ್ಯಗಳಲ್ಲಿ ಸಂಚರಿಸಿ ಕೊರೊನಾ ಹರಡುವಿಕೆ ಹಾಗೂ ನಿಯಂತ್ರಣದ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಂದೋಲನ ಕೈಗೊಂಡಿರುವುದು ಉತ್ತಮ ಕೆಲಸ’ ಎಂದರು.
‘ಪರಿಸರ ಹಾಗೂ ಆರೋಗ್ಯಕ್ಕೆ ಸಂಬಂಧಪಟ್ಟಂತೆ ತೇನ್ಸಿಂಗ್ ಯುವ ಸಾಹಸಿ ಸಂಘವು 25 ಬಾರಿ ದೇಶವ್ಯಾಪಿ ಬೈಕ್ ರ್ಯಾಲಿ ಕೈಗೊಂಡು, ಜನರಲ್ಲಿ ಅರಿವು ಮೂಡಿಸಿದೆ. ಈ ಬಾರಿ ಕೊವಿಡ್-19 ಜಾಗೃತಿ ಮೂಡಿಸಲಾಗುವುದು’ ಎಂದು ಸಂಘದ ಸದಸ್ಯರು ತಿಳಿಸಿದರು.
ಬೈಕ್ ರ್ಯಾಲಿ ತಂಡದಲ್ಲಿಸಂಘದ ಡಾ.ಅಪ್ಪಾಜಿಗೌಡ, ಡಾ.ಅಶೋಕ್, ಪ್ರಗತಿ ಶಂಕರ್, ಡಿಶ್ ರಾಜು, ಯೋಗೇಶ್, ಎಂಜಿನಿಯರ್ ಮಂಜುನಾಥ್ ಹಾಗೂ ರವಿ ಇದ್ದಾರೆ.
ಕಾರ್ಯಕ್ರಮದಲ್ಲಿ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ನಿರ್ದೇಶಕ ತೋಟಿ ಜಯರಾಮ್, ಸಹಕಾರ ಸಂಘದ ಅಧ್ಯಕ್ಷ ವೆಂಕಟೇಶ್, ನಿರ್ದೇಶಕ ಬಾಬು, ಫೈನಾನ್ಸ್ ಮಹೇಶ್ ಮತ್ತಿತರರು ಇದ್ದರು.