ಸಕಲೇಶಪುರ: ಲಾಠಿಯಿಂದ ಹೊಡೆದ ಹಾಗೂ ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಆರ್.ಹರೀಶ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲ್ಲೂಕಿನ ಬಾಳ್ಳುಪೇಟೆಯ ಚಿಕ್ಕನಾಯಕನಹಳ್ಳಿ ಗ್ರಾಮದ ಸುತ್ತಮುತ್ತಲ ಮನೆಗಳನ್ನು ಕಂಟೈನ್ಮೆಂಟ್ ವಲಯ ಎಂದು ಗುರುತಿಸಲಾಗಿತ್ತು. ಈ ವಲಯ ದಾಟಿ ನಿಯಮ ಉಲ್ಲಂಘಿಸಿದ್ದಾರೆ ಎಂದು ಹರೀಶ್ ಅವರು ಜಯರಾಜು ಎಂಬುವವರಿಗೆ ಲಾಠಿಯಿಂದ ಹೊಡೆದಿದ್ದಾರೆ ಎನ್ನಲಾಗಿದೆ.
‘ಗ್ರಾಮದ ಚಂದ್ರೇಗೌಡರ ಅಂಗಡಿ ಹತ್ತಿರ ಇದ್ದಾಗ ಬಾಳ್ಳು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶೇಖರ್ ಎಂಬುವವರೊಂದಿಗೆ ಬಂದ ಇಒ ಹರೀಶ್ ಅವರು ಲಾಠಿಯಿಂದ ಹೊಡೆದರು. ಅದನ್ನು ಪ್ರಶ್ನೆ ಮಾಡಿದ ನನ್ನ ಪತ್ನಿಯ ಜಾತಿ ನಿಂದನೆ ಮಾಡಿದರು’ ಎಂದು ಜಯರಾಜ್ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಹರೀಶ್ ಅವರು ಪ್ರತಿಕ್ರಿಯೆ ಪಡೆಯಲು ಲಭ್ಯರಾಗಿಲ್ಲ.
ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಬಾಳ್ಳುಪೇಟೆ ಪಿಡಿಒ ಪ್ರಭಾ ಅವರು ಜಯರಾಜ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.