ಅರಕಲಗೂಡು: ತಾಲ್ಲೂಕಿನಲ್ಲಿ ಮೋಡ ಮುಸುಕಿದ ವಾತಾವರಣ ಹಾಗೂ ತುಂತುರು ಮಳೆ ಬೀಳುತ್ತಿರುವುದರಿಂದ ಭತ್ತದ ಕಟಾವು ಮಾಡುತ್ತಿರುವ ರೈತರನ್ನು ಆತಂಕಕ್ಕೆ ದೂಡಿದೆ.
ತಾಲ್ಲೂಕಿನ ಹಾರಂಗಿ, ಹೇಮಾವತಿ ಹಾಗೂ ಕಟ್ಟೇಪುರ ನಾಲಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಬೆಳೆ ಕಟಾವು ಕಾರ್ಯ ಚುರುಕಾಗಿತ್ತು. ಆದರೆ, ಹವಾಮಾನ ವೈಪರೀತ್ಯ ಹಾಗೂ ಆಗಾಗ ಬೀಳುವ ತುಂತುರು ಮಳೆ ಭತ್ತದ ಕಟಾವಿಗೆ ಅಡ್ಡಿಯಾಗಿದೆ.
ಕೆಲವು ಕಡೆ ರೈತರು ಭತ್ತದ ಕಟಾವು ಅರೆಬರೆ ಮಾಡಿದ್ದು, ಬಿಸಿಲು ಬೀಳದ್ದರಿಂದ ಗದ್ದೆಗಳಲ್ಲಿ ಹುಲ್ಲು ಒಣಗಿಲ್ಲ, ಗುಡ್ಡೆ ಹಾಕಲು ಆಗುತ್ತಿಲ್ಲ. ಆದರೂ, ಮಳೆ ಬರುವ ಭೀತಿ ನಡುವೆಯೇ ಹಲವೆಡೆ ರೈತರು ತರಾತುರಿಯಲ್ಲಿ ಬಣವೆ ಹಾಕುತ್ತಿದ್ದಾರೆ.
‘ಮೊದಲೇ ಕೂಲಿ ಕಾರ್ಮಿಕರ ಕೊರತೆ ಇದೆ. ಮಳೆಯಿಂದಾಗಿ ಕಟಾವಿಗೆ ಬಂದಿರುವ ಭತ್ತದ ಫಸಲು ಗದ್ದೆಗಳಲ್ಲಿ ಹಾಳಾಗುತ್ತಿದೆ’ ಎಂದು ರೈತರು ತಮ್ಮ ನೋವು ಹೇಳಿಕೊಂಡರು.