ಹಾಸನ: ಸಾಹಿತಿ, ನಾಟಕಕಾರಬೇಲೂರು ಕೃಷ್ಣಮೂರ್ತಿ (89) ಮಂಗಳವಾರ ಬೆಳಿಗ್ಗೆ ನಿಧನರಾದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು, ನಗರದ ಸಂಜೀವಿನಿ ಆಸ್ಪತ್ರೆಗೆ ಸೋಮವಾರ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮಂಗಳವಾರ ಮೃತಪಟ್ಟರು.
ಕೃಷ್ಣಮೂರ್ತಿ ಅವರಿಗೆ ಪತ್ನಿ, ಪುತ್ರಿ ಹಾಗೂ ಮೂವರು ಪುತ್ರರಿದ್ದಾರೆ.
ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಬಳಿಕ ಬೇಲೂರಿಗೆ ಕೊಂಡೊಯ್ದು ವಿಧಿವಿಧಾನ ಪೂರ್ಣಗೊಳಿಸಿ, ಪೂರ್ವನಿಗದಿಯಂತೆ ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯಕ್ಕೆ ಮೃತದೇಹವನ್ನು ದಾನ ಮಾಡಲಾಯಿತು.
ಅಖಿಲ ಕರ್ನಾಟಕ ನಾಟಕಕಾರರ ಸಂಘದ ಅಧ್ಯಕ್ಷರಾಗಿ, ಬೆಂಗಳೂರು ರಂಗಕರ್ಮಿಗಳ ಒಕ್ಕೂಟದ ಗೌರವಾಧ್ಯಕ್ಷರಾಗಿ ಹಾಗೂ ಭಾರತ ಸೇವಾದಳದ ಪ್ರಮುಖರಾಗಿ ಕಾರ್ಯನಿರ್ವಹಿಸಿದ್ದರು.
‘ಭಂಡಬಾಳು’, ‘ಅಸಲಿ ನಕಲಿ’, ‘ಆಹುತಿ’, ‘ಸೇವೆ‘, ‘ಬಲಿ’, ‘ಜ್ವಾಲೆ’ ಕೃಷ್ಣಮೂರ್ತಿ ಅವರ ಪ್ರಮುಖ ನಾಟಕ ಗಳು. ಇವರ 100 ನಾಟಕಗಳನ್ನೊಳಗೊಂಡ, 11 ಪುಸ್ತಕಗಳು ಪ್ರಕಟವಾಗಿವೆ.
‘ದಾಹ’, ‘ಪುತ್ರ ವಾತ್ಸಲ್ಯ’, ‘ನಿಗೂಢ’, ‘ಬೆಟ್ಟ ಬೈರಾಗಿ’, ‘ಪುನರ್ಜನ್ಮ’, ‘ನಗೆಗಡಲು’, ‘ಬುರುಡೆ’ ಹಾಗೂ ‘ವಿಷ್ಣುವರ್ಧನ’ ಇವರ ಪ್ರಮುಖ ಕಾದಂಬರಿಗಳು.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, 2017ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಬುದ್ಧ ಶಾಂತಿ ಪ್ರಶಸ್ತಿ, ಆರ್ಯಭಟ, ಸುವರ್ಣ ಕನ್ನಡಿಗ, ಸಾಹಿತ್ಯ ಶ್ರೀ, ನಾಟಕ ಶ್ರೀ ಸೇರಿದಂತೆ ಹಲವು ಸಮ್ಮಾನಗಳು ಅವರಿಗೆ ಸಂದಿವೆ.