ಹಾಸನ: ಪರಿಸರದ ಬಗ್ಗೆ ಪ್ರತಿಯೊಬ್ಬರಿಗೂ ಕಾಳಜಿ ಇರಬೇಕು ಹಾಗೂ ಅದಕ್ಕೆ ಪೂರಕ ಕೆಲಸಗಳಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಹೇಳಿದರು.
ಈದ್ಗಾ ಮೈದಾನದಲ್ಲಿ 250 ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರ ಅನುಷ್ಠಾನಗೊಳಿಸುತ್ತಿರುವ ಜಲಾಮೃತ, ಜಲಮರುಪೂರಣ, ಹಸಿರೀಕರಣ, ಇತರ ಯೋಜನೆ ಪೂರ್ಣಗೊಳಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ನೀರಿನ ಅಭಾವ ಹೋಗಲಾಡಿಸಲು ಕೆರೆಗಳ ಪುನಶ್ಚೇತನ ಹಾಗೂ ಗಿಡಗಳನ್ನು ನೆಡುವ ಜೊತೆಗೆ ಅವುಗಳನ್ನು ಪೋಷಣೆ ಮಾಡುವುದು ಬಹಳ ಮುಖ್ಯ ಎಂದು ಅಭಿಪ್ರಾಯಪಟ್ಟರು.
ಸಂಘ, ಸಂಸ್ಥೆಗಳು, ಅರಣ್ಯ ಇಲಾಖೆ ಸಿಬ್ಬಂದಿ ಸಸಿಗಳನ್ನು ನೆಟ್ಟರು. ಈದ್ಗಾ ಸಮಿತಿ ಅಧ್ಯಕ್ಷ ಅಶ್ವಕ್, ನಗರಸಭಾ ಸದಸ್ಯರಾದ ರಫಿಕ್, ಅಶು, ಮುಖಂಡ ಅಬ್ದುಲ್ ರಹೀಂ, ಸಾಮಾಜಿಕ ಕಾರ್ಯಕರ್ತ ಎಸ್.ಎಸ್.ಪಾಷಾ ಹಾಜರಿದ್ದರು.