ಹೆತ್ತೂರು: ಕಾಡಾನೆ ಹಿಂಡೊಂದು ಗ್ರಾಮದಲ್ಲಿ ಸಂಚರಿಸಿ ಆತಂಕ ಹುಟ್ಟು ಹಾಕಿರುವ ಘಟನೆ ಯಸಳೂರು ಹೋಬಳಿಯ ಮಾಗಲು ಗ್ರಾಮದಲ್ಲಿ ಸೋಮವಾರ ನಡೆದಿದೆ.
3 ಆನೆಗಳಿರುವ ಕಾಡಾನೆ ಹಿಂಡು ಗ್ರಾಮದೊಳಗಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಮೀಪ ಸಂಚರಿಸಿದ್ದು ಕಾಡಾನೆ ಹಿಂಡು ಕಂಡ ಗ್ರಾಮಸ್ಥರು ಭಯಗೊಂಡಿದ್ದಾರೆ.
ಗ್ರಾಮದಿಂದ ಹೊರ ಹೋದ ಕಾಡಾನೆಗಳು ಕೆಲಕಾಲ ಕುಂಬ್ರಹಳ್ಳಿ, ಮಾಗಲು, ಚನ್ನಪುರ ರಸ್ತೆಯಲ್ಲಿ ನಿಂತು ಸಂಚಾರಕ್ಕೆ ಅಡ್ಡಿ ಉಂಟು ಮಾಡಿದ್ದು ನಂತರ ಸಮೀಪ ಕಾಫಿ ತೋಟ ಹಾಗೂ ಅರಣ್ಯದಲ್ಲಿ ಅಡಗಿವೆ.
ಶಿಕ್ಷಕ ತಮ್ಮಣ್ಣ ಶೆಟ್ಟಿ ಅರಣ್ಯ ಇಲಾಖೆಯವರಿಗೆ ಈ ಬಗ್ಗೆ ತಿಳಿಸಿದ್ದು ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾಡಾನೆಗಳನ್ನು ಸ್ಥಳದಿಂದ ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ.