ಚನ್ನರಾಯಪಟ್ಟಣ: ಪಟ್ಟಣದ ನವೋದಯ ವಿದ್ಯಾ ಸಂಸ್ಥೆಯಲ್ಲಿ ವ್ಯಾಸಂಗ ಪೂರ್ಣಗೊಳಿಸಿ, ಸದ್ಯ ಅಮೆರಿಕ ದೇಶದ ನೆಟ್ಫ್ಲಿಕ್ಸ್ ಸಂಸ್ಥೆಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ದೇವಾನಂದ್, ತಾವು ವ್ಯಾಸಂಗ ಮಾಡಿದ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ₹21 ಲಕ್ಷ ದೇಣಿಗೆ ನೀಡಿದ್ದಾರೆ.
ದೇಣಿಗೆಯನ್ನು ಬೆಂಗಳೂರಿನ ರೈಟ್ ಟು ಲೀವ್ ಸಂಸ್ಥೆ ಮೂಲಕ ನೀಡಲಾಗಿದೆ. ಸಂಸ್ಥೆಯ ವ್ಯವಸ್ಥಾಪಕ ವೀರೇಶ್, ಸಿಬ್ದಂದಿ ಜಯಂತ್ ಬುಧವಾರ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಪರಿಶೀಲಿಸಿದರು.
ಶಿಕ್ಷಣ ಸಂಸ್ಥೆಯ ಪರವಾಗಿ ವೀರೇಶ್, ಜಯಂತ್ ಅವರನ್ನು ಶಾಸಕ ಸಿ.ಎನ್. ಬಾಲಕೃಷ್ಣ, ನವೋದಯ ವಿದ್ಯಾ ಸಂಘದ ಅಧ್ಯಕ್ಷ ಟಿ.ಸಿ. ಬಸವರಾಜು, ಕಾರ್ಯದರ್ಶಿ ಬೋಜರಾಜು, ಉಪಾಧ್ಯಕ್ಷ ಕಿರಣ್, ಪದಾಧಿಕಾರಿಗಳಾದ ಸುರೇಶ್, ಎಚ್.ಎನ್. ನವೀನ್, ಸಿ.ಎಸ್. ಆದಿಶೇಷಕುಮಾರ್, ನಂಜುಂಡ ಮೈಮ್ ಸನ್ಮಾನಿಸಿದರು.
ಶಾಸಕ ಬಾಲಕೃಷ್ಣ ಮಾತನಾಡಿ, ನವೋದಯ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿ ಈಗ ಅಮೆರಿಕದಲ್ಲಿ ನೆಲೆಸಿರುವ ದೇವಾನಂದ್, ತಾವು ಓದಿದ ಶಾಲೆಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಸರ್ಕಾರಿ, ಅನುದಾನಿತ ಶಾಲೆಗಳಿಗೆ ಸಂಪನ್ಮೂಲದ ಕೊರತೆ ಇರುತ್ತದೆ. ಅದನ್ನು ಹಿರಿಯ ವಿದ್ಯಾರ್ಥಿಗಳು ಭರಿಸುವ ಮೂಲಕ ಶೈಕ್ಷಣಿಕ ಪ್ರಗತಿಗೆ ಶ್ರಮಿಸಲು ಮುಂದಾಗಿರುವುದು ಉತ್ತಮ ಬೆಳವಣಿಗೆ. ದೇವಾನಂದ್ ತಾಯ್ನಾಡಿಗೆ ಆಗಮಿಸಿದಾಗ ಶಿಕ್ಷಣ ಸಂಸ್ಥೆ ವತಿಯಿಂದ ಗೌರವಿಸಬೇಕು ಎಂದರು.
ದಾನಿಗಳ ನೆರವಿನಿಂದ ರೈಟ್ ಟು ಲೀವ್ ಸಂಸ್ಥೆ ಕರ್ನಾಟಕದಲ್ಲಿ ಸರ್ಕಾರಿ ಶಾಲೆ ಮತ್ತು ಅನುದಾನಿತ ಶಾಲೆಗಳ ಪುನಶ್ಚೇತನ ಮಾಡುತ್ತಿದೆ. ರಾಜ್ಯದಲ್ಲಿ ಇದುವರೆಗೆ 300 ಶಾಲಾ, ಕಾಲೇಜುಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ವ್ಯವಸ್ಥಾಪಕ ವೀರೇಶ್ ಮಾಹಿತಿ ನೀಡಿದರು. ಕಾಲೇಜು ಪ್ರಾಂಶುಪಾಲ ಎಂ.ಎಸ್. ಕಾಂತರಾಜು ಭಾಗವಹಿಸಿದ್ದರು.