ಆಲೂರು (ಹಾಸನ ಜಿಲ್ಲೆ): ತಾಲ್ಲೂಕಿನ ಕದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತಿಗೆಪುರದ ಕೆರೆಯಲ್ಲಿ ಗುರುವಾರ ಈಜಲು ಹೋಗಿದ್ದ ನಾಲ್ವರು ಬಾಲಕರು ಹೂಳಿಗೆ ಸಿಲುಕಿ ಮೃತಪಟ್ಟಿದ್ದಾರೆ.
ಪೃಥ್ವಿರಾಜ್ (14), ವಿಶ್ವಾಸ್ (13), ಜೀವನ್ (13), ಸಾತ್ವಿಕ್ (13) ಮೃತರು. ಬೇಲೂರು ತಾಲ್ಲೂಕು ಮದಘಟ್ಟ ಗ್ರಾಮದ ಸಾತ್ವಿಕ್, ರಜೆ ಹಿನ್ನೆಲೆಯಲ್ಲಿ ಮುತ್ತಿಗೆಪುರದ ಅಜ್ಜಿ ಮನೆಗೆ ಬಂದಿದ್ದ. ಎರಡು ತಿಂಗಳ ಹಿಂದೆ ಈತನ ತಂದೆ ಮೃತಪಟ್ಟಿದ್ದರು.
ಎಲ್ಲ ಮಕ್ಕಳು ಕೂಲಿ ಕಾರ್ಮಿಕರ ಕುಟುಂಬದವರು. ವಿಶ್ವಾಸ್, ಆಶಾ ಕಾರ್ಯಕರ್ತೆ ಪುಷ್ಪಲತಾ ಅವರ ಮಗ. ನಾಲ್ವರು ಪೋಷಕರಿಗೂ ಒಬ್ಬೊಬ್ಬರೇ ಗಂಡು ಮಕ್ಕಳಿದ್ದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಭೇಟಿ ನೀಡಿದ್ದರು.