ಹಳೇಬೀಡು: ಗೋಣಿಸೋಮನಹಳ್ಳಿಯಲ್ಲಿ ಶನಿವಾರ ಕೋಡಿಹಳ್ಳಿ ಕಂದಾಯ ವೃತ್ತದ ಪಿಂಚಣಿ ಆದಾಲತ್ ನಡೆಯಿತು.
ತಹಶೀಲ್ದಾರ್ ಎಂ.ಮಮತ ನೇತೃತ್ವದಲ್ಲಿ ನಡೆದ ಆದಾಲತ್ನಲ್ಲಿ 19 ವೃದ್ದಾಪ್ಯ, ವಿಧವಾ ವೇತನ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಮಂಜೂರಾತಿ ಪತ್ರ ನೀಡಲಾಯಿತು. ತಹಶೀಲ್ದಾರ್ ಮಮತಾ ಹೊಸ ಅರ್ಜಿಗಳ ಪರಿಶೀಲನೆ ನಡೆಸಿದರು. ಸಮರ್ಪಕ ದಾಖಲಾತಿ ಇರುವವರಿಗೆ ವೇತನ ಮಂಜೂರು ಮಾಡಿಕೊಡಲು ರಾಜಸ್ವ ನಿರೀಕ್ಷಕ ಹಾಗೂ ಗ್ರಾಮಲೆಕ್ಕಿಗರಿಗೆ ಸೂಚಿಸಿದರು.
‘ಪಿಂಚಣಿ ಅರ್ಜಿಗಳನ್ನು ತಡ ಮಾಡದೆ ಪರಿಶೀಲನೆ ನಡೆಸಬೇಕು. ಅರ್ಹರಿಗೆ ಬೇಗ ಪಿಂಚಣಿ ಮಂಜೂರು ಮಾಡಿಸಬೇಕು’ ಎಂದರು.
‘ವೃದ್ದ, ವಿಧವೆ ಹಾಗೂ ಅಂಗವಿಕಲರು ಪಿಂಚಣಿಗಾಗಿ ಅಲೆದಾಡಬಾರದು. ಸೂಕ್ತ ದಾಖಲಾತಿ ಇದ್ದವರಿಗೆ ಪಿಂಚಣಿ ಮಂಜೂರಾತಿ ವಿಳಂಬವಾದರೆ ನಮಗೆ ತಿಳಿಸಬೇಕು. ಕಚೇರಿ ಸಿಬ್ಬಂದಿ ಹಾಗೂ ಮಧ್ಯವರ್ತಿಗಳಿಗೆ ಯಾರೂ ಹಣ ಕೊಡಬಾರದು’ ಎಂದು ತಹಶಿಲ್ದಾರ್ ಮಮತ ಹೇಳಿದರು.
ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ಕಂದಾಯ ಇಲಾಖೆ ಸೌಲಭ್ಯಗಳ ಕುರಿತು ಪ್ರಶ್ನೆ ಕೇಳಿ ಮಾಹಿತಿ ಪಡೆದುಕೊಂಡರು. ಕೋಡಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪ ಅಂಬರೀಶ್, ಗೋಣಿಸೋಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯತ್ರಿ, ರಾಜಸ್ವ ನಿರೀಕ್ಷಕ ಲೀಲಾನಂದ ಇದ್ದರು.