ಹಾಸನ: ಜಾನುವಾರು ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ಮೇಲೆ ಹಿರೀಸಾವೆ ಹೋಬಳಿಯಲ್ಲಿ ಗಂಡುಕರುಗಳನ್ನು ಕೆಲವರು ಹತ್ತಿರದ ಕೆರೆ ಅಂಗಳ, ಕಾಡುಗಳಿಗೆ ಬಿಡುತ್ತಿದ್ದಾರೆ. ಕೃಷಿ ಚಟುವಟಿಕೆಗೆ ಅನುಕೂಲವಾಗಲಿದೆ ಎಂಬ ಕಾರಣಕ್ಕೆ ಕೆಲವರು ನಾಟಿ ತಳಿ ಕರುಗಳನ್ನು ಸಾಕುತ್ತಿದ್ದಾರೆ.
‘ಎಚ್ಎಫ್ ಆಥವಾ ಜರ್ಸಿ ಕರುವಿಗೆ ಪ್ರತಿ ನಿತ್ಯ ಮೂರು ಲೀಟರ್ ಹಾಲು ಬೇಕು. ದೂರದ ಗೋಶಾಲೆಗೆ ಬಿಡಲು ಹೆಚ್ಚು ಹಣ ಖರ್ಚು ಆಗುತ್ತದೆ. ಹಾಗಾಗಿ ಸಮೀಪದ ಕೆರೆ ಅಂಗಳದಲ್ಲಿ ಬಿಡಲಾಗಿದೆ’ ಎನ್ನುತ್ತಾರೆ ರೈತ ರಾಮಕೃಷ್ಣ
ಅರಸೀಕೆರೆ ತಾಲ್ಲೂಕಿನಲ್ಲಿ ಗಂಡು ಕರುಗಳನ್ನು ಕೆಲವರು ಗೋಶಾಲೆಗಳಿಗೆ ಬಿಡುತ್ತಿದ್ದಾರೆ.
‘ಕನಿಷ್ಠ 6 ತಿಂಗಳವರೆಗೆ ಕರುಗಳಿಗೆ ಹಸುವಿನ ಹಾಲು ಕುಡಿಸಿದರೆ ಮಾತ್ರ ಬದುಕುತ್ತವೆ. ಡೈರಿ ಹಾಲನ್ನುಎಷ್ಟೇ ಕುಡಿಸಿದರೂ ಮೂರು ದಿನಗಳಲ್ಲಿ ಮೃತಪಡುತ್ತವೆ’ ಎಂದು ತಾಲ್ಲೂಕು ಗೋ ಸಂರಕ್ಷಣಾ ಪರಿವಾರದ ಅಧ್ಯಕ್ಷ ಪಾರಸ್ ಜೈನ್ ಹೇಳಿದರು.
ಕಸ್ತೂರಬಾ ಗಾಂಧಿ ಸ್ಮಾರಕ ಆಶ್ರಮದ ಗೋ ಶಾಲೆಯ ವ್ಯವಸ್ಥಾಪಕ ಮೋಹನ್ ಕುಮಾರ್, ‘ ಗಂಡು ಕರುಗಳನ್ನು ಅರಣ್ಯಕ್ಕೆ ಬಿಡುವ ಬದಲು ಗೋಶಾಲೆಗೆ ತಂದು ಬಿಟ್ಟರೆ ನೋಡಿಕೊಳ್ಳುತ್ತೇವೆ’ ಎಂದರು.
ಅಗ್ಗುಂದ ಗ್ರಾಮದ ಕುಮಾರಸ್ವಾಮಿ ಮಾತನಾಡಿ, ‘ಕಾಡಿಗೆ ಬಿಟ್ಟು ಬಂದರೆ ಕರುಗಳು ಕಾಡು ಪ್ರಾಣಿಗಳಿಗೆ ತುತ್ತಾಗುತ್ತವೆ. ಮೂರು ದಿನ ಹಸುವಿನ ಹಾಲುಣಿಸುವುದನ್ನು ನಿಲ್ಲಿಸಿದರೆ ಕರುಗಳು ಸಾವನ್ನಪ್ಪುತ್ತವೆ’ ಎಂದರು.