ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಿಪಿಒ ವರ್ಗಾವಣೆಗೆ ಆಗ್ರಹ

ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
Last Updated 8 ಜನವರಿ 2021, 14:09 IST
ಅಕ್ಷರ ಗಾತ್ರ

ಹಾಸನ: ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ)ಯಿಂದ ಅಧೀನ ನೌಕರರಿಗೆ ಕಿರುಕುಳವಾಗುತ್ತಿದ್ದು, ಕೂಡಲೇ ಅವರನ್ನು ಬೇರೆಡೆಗೆ ವರ್ಗಾಯಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಹೇವಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಕಾರರು ಎನ್‌.ಆರ್‌. ವೃತ್ತ, ಬಿ.ಎಂ.ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ಸಿಡಿಪಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪಾ ಮಾತನಾಡಿ, ‘ಹಾಸನ ಸಿಡಿಪಿಒ ಆಗಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿರುವ ಜಯಕಿರಣ ಅವರು ಕಚೇರಿಯನ್ನು ಖಾಸಗಿ ಸ್ವತ್ತು ಎಂಬಂತೆ ಪರಿಗಣಿಸಿದ್ದಾರೆ. ಅಂಗನವಾಡಿ ನೌಕರರ ಕುಂದುಕೊರತೆ ಸಭೆ ನಡೆಸಿಲ್ಲ. ಅಂಗನವಾಡಿಗಳ ತಪಾಸಣೆಯನ್ನು ಅವರ ತಂದೆ, ತಾಯಿ ಹಾಗೂ ಸಹೋದರ ನಡೆಸುತ್ತಾರೆ. ಮೊಟ್ಟೆ, ತರಕಾರಿ ಖರೀದಿಗೆ ಸಮಯಕ್ಕೆ ಸರಿಯಾಗಿ ಹಣ ಬಿಡುಗಡೆ ಮಾಡುವುದಿಲ್ಲ. ತಾಲ್ಲೂಕಿನ ಯಾವ ಅಂಗನವಾಡಿ ನೌಕರರೊಂದಿಗೂ ಸೌಹಾರ್ದತೆ ಹೊಂದಿಲ್ಲ’ ಎಂದು ಆರೋಪಿಸಿದರು.

‘ಕಚೇರಿಯ ಗುಮಾಸ್ತರು ಇವರ ಕಿರುಕುಳ ತಾಳದೆ ನಾಲ್ಕು ತಿಂಗಳಿಂದ ರಜೆ ಹಾಕಿದ್ದಾರೆ. ಇದರಿಂದ ಇಲಾಖೆ ಕೆಲಸಗಳು ಕುಂಠಿತವಾಗಿವೆ. ಅಂಗನವಾಡಿ ನೌಕರರ ಮುಂಬಡ್ತಿ ಕಡತಗಳು ನನೆಗುದಿಗೆ ಬಿದ್ದಿವೆ. ಇತರೆ ಸಿಬ್ಬಂದಿಗೂ ಇದೇ ರೀತಿ ಕಿರುಕುಳ ನೀಡುತ್ತಾರೆ. ಜಯಕಿರಣ ಅವರ ಕುಟುಂಬ ಸದಸ್ಯರ ದಬ್ಬಾಳಿಕೆ ಮಿತಿ ಮೀರಿದೆ. ಸಿಡಿಪಿಒ ತಮ್ಮ ಅಧಿಕಾರ ವ್ಯಾಪ್ತಿ ಮೀರಿ ವರ್ತಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‌‘ಕಚೇರಿ ಮತ್ತು ಇಲಾಖೆಯಲ್ಲಿನ ಇಂತಹ ಪರಿಸ್ಥಿತಿಯನ್ನು ಪ್ರಶ್ನಿಸಿದರೆ ನೌಕರರ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸುತ್ತಾರೆ. ಜೊತೆಗೆ ಸೇಡಿನ ಕ್ರಮ ಕೈಗೊಳ್ಳುತ್ತಾರೆ. ಕಾರ್ಮಿಕ ವಿರೋಧಿ ಮತ್ತು ಜನ ವಿರೋಧಿ ಆಗಿರುವ ಸಿಡಿಪಿಒ ವಿರುದ್ಧ ತನಿಖೆಗೆ ಆದೇಶಿಸಬೇಕು’ ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರಿಗೆ ಮನವಿ ಸಲ್ಲಿಸಿದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್, ಮುಖಂಡರಾದ ಅರವಿಂದ, ಜಿ.ಪಿ. ಸತ್ಯನಾರಾಯಣ ಹಾಗೂ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT