ವಿಪಕ್ಷ ನಾಯಕ ಹುದ್ದೆಗೆ ಎಚ್ಡಿಕೆ ಅಗೌರವ: ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ

ಹಾಸನ: ‘ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ವಿರೋಧ ಪಕ್ಷದ ನಾಯಕರ ಹುದ್ದೆಗೆ ಅಗೌರವ ಬರುವಂತೆ ಮಾತನಾಡಿದ್ದಾರೆ. ಇದರಿಂದ ರಾಜಕೀಯ ನಾಯಕರು ತಲೆತಗ್ಗಿಸುವಂತಾಗಿದೆ’ ಎಂದು ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ ಹೇಳಿದರು.
‘ಸಿದ್ದರಾಮಯ್ಯ ಅವರನ್ನು ವೈಯಕ್ತಿಕವಾಗಿ ಟೀಕೆ ಮಾಡುವ ಭರದಲ್ಲಿ ಕುಮಾರಸ್ವಾಮಿ ಅವರು ಅಸಂವಿಧಾನಿಕ ಪದ ಬಳಕೆ ಮಾಡುವ ಮೂಲಕ ವಿರೋಧ ಪಕ್ಷದ ನಾಯಕರ ಹುದ್ದೆಗೆ ಅಗೌರವ ತಂದಿದ್ದಾರೆ. ಸಾಮಾನ್ಯ ಪರಿಜ್ಞಾನ ಇರುವವರು ಇಂತಹ ಪದ ಬಳಕೆ ಮಾಡುವುದಿಲ್ಲ. ಅವರ ಹೇಳಿಕೆಯಿಂದಾಗಿ ರಾಜಕೀಯ ನಾಯಕರು ತಲೆ ತಗ್ಗಿಸುವಂತಾಗಿದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
‘ವಿರೋಧ ಪಕ್ಷದ ನಾಯಕರ ಹುದ್ದೆ ಅಲಂಕರಿಸಿದ್ದ ಹಾಸನದ ಎಚ್.ಡಿ.ದೇವೇಗೌಡ ಮತ್ತು ಎಸ್.ಶಿವಪ್ಪ ಅವರು ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಜಿಲ್ಲೆಯ ರಾಜಕಾರಣಕ್ಕೆ ವಿಶೇಷ ಗೌರವವಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
ಜಿಲ್ಲೆಯ ಸರ್ಕಾರಿ ಕಚೇರಿಗಳು ಭ್ರಷ್ಟಾಚಾರದ ಕೂಪವಾಗಿವೆ. ಈ ಬಗ್ಗೆ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಲಾಗುವುದು. ಅ. 30ರ ನಂತರ ಕಾಂಗ್ರೆಸ್ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಎಸ್.ಆರ್. ಪಾಟೀಲ್ ಅವರನ್ನು ಜಿಲ್ಲೆಗೆ ಕರೆಯಿಸಲಾಗುವುದು’ ಎಂದರು.
ಮುಖಂಡ ಬಾಗೂರು ಮಂಜೇಗೌಡ ಮಾತನಾಡಿ, ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಹಾಸನ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ. ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಿರುವುದು ಸತ್ಯ. ಆದರೆ, ಮಹೇಶ್ ಹಾಗೂ ನನ್ನ ನಡುವೆ ಯಾವುದೇ ಹೊಂದಾಣಿಕೆಯಾಗಿಲ್ಲ. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಅವರು ಪರವಾಗಿ ಕೆಲಸ ಮಾಡಲಾಗುವುದು’ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಮುಖಂಡರಾದ ಎಚ್.ಕೆ.ಮಹೇಶ್, ರವಿಕುಮಾರ್, ಗಿರೀಶ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.