ಹಾಸನ: ತೋಟದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರ ಮೇಲೆ ಕಾಡು ಹಂದಿ ದಾಳಿ ನಡೆಸಿದೆ.
ತಾಲ್ಲೂಕಿನ ಬ್ಯಾಡರಹಳ್ಳಿ ಮಂಡಿಕೊಪ್ಪಲು ಗ್ರಾಮದ ಮಂಜೇಗೌಡ (50), ಸ್ವಾಮಿಗೌಡ (56) ಗಾಯಗೊಂಡಿದ್ದು, ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿದೆ.
ಮಧ್ಯಾಹ್ನ ತಮ್ಮ ತೋಟದಲ್ಲಿ ಮೆಣಸಿನಕಾಯಿ ಕುಯ್ಯುತ್ತಿದ್ದಾಗ ದಿಢೀರ್ ದಾಳಿ ನಡೆಸಿದ ಕಾಡು ಹಂದಿಯು, ಕೈ, ಹೊಟ್ಟೆ ಹಾಗೂ ಸೊಂಟದ ಮೇಲೆ ತಿವಿದಿದೆ.
ಸುತ್ತಲಿನ ನಾಯಿಗಳು ಜೋರಾಗಿ ಕೂಗಿದ್ದರಿಂದ ಕಾಡು ಹಂದಿ ಅಲ್ಲಿಂದ ಪರಾರಿಯಾಗಿದೆ. ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಜನರು ಸ್ಥಳಕ್ಕೆ ದೌಡಾಯಿಸಿ ಇಬ್ಬರಿಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ ಹಿಮ್ಸ್ಗೆ ದಾಖಲಿಸಿದರು.
ಅರಣ್ಯಾಧಿಕಾರಿಗಳು ಕಾಡು ಪ್ರಾಣಿಗಳು ನಾಡಿಗೆ ಬರುವುದನ್ನು ತಪ್ಪಿಸುವ ಮೂಲಕ ಕಾಡಂಚಿನ ಗ್ರಾಮಗಳ ಜನರು ನೆಮ್ಮದಿಯಿಂದ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಗಾಯಾಳು ಸ್ವಾಮಿಗೌಡರ ಪುತ್ರಿ ಮಂಜಳಾ ಮನವಿ ಮಾಡಿದರು.
ಕಟ್ಟಾಯ ಭಾಗದಲ್ಲಿ ಕಾಡು ಹಂದಿ ಹಾಗೂ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಅವುಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.