ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಭೂ ದಿನಕ್ಕೆ ಸಾರ್ವಜನಿಕರಿಂದ ಸ್ಪಂದನೆ;ಕಾಲ್ನಡಿಗೆಯಲ್ಲೇ ಕಚೇರಿಗೆ ಬಂದ ಡಿಸಿ

Last Updated 22 ಏಪ್ರಿಲ್ 2019, 14:04 IST
ಅಕ್ಷರ ಗಾತ್ರ

ಹಾಸನ: ವಿಶ್ವ ಭೂ ದಿನದ ಅಂಗವಾಗಿ ಸ್ವಂತ ವಾಹನ ಬಳಸದೆ ಕಾಲ್ನಡಿಗೆ ಇಲ್ಲವೇ ಸಾರಿಗೆ ಬಸ್ ಅವಲಂಬಿಸಿ ಕಚೇರಿಗೆ ಬರುವಂತೆ ಜಿಲ್ಲಾಡಳಿತ ನೀಡಿದ ಕರೆಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಜಿಲ್ಲಾಧಿಕಾರಿ ‌ಪ್ರಿಯಾಂಕ ಮೇರಿ ಫ್ರಾನ್ಸಿಸ್‌, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ವಿಜಯ ಪ್ರಕಾಶ್‌ , ಉಪವಿಭಾಗಾಧಿಕಾರಿ ಎಚ್‌.ಎಲ್‌.ನಾಗರಾಜ್‌, ವಿವಿಧ ಇಲಾಖೆ ಅಧಿಕಾರಿಗಳು, ಹಲವು ಸಂಘ ಸಂಸ್ಥೆಗಳ ಸದಸ್ಯರು, ವಿದ್ಯಾರ್ಥಿಗಳು ಕಾಲ್ನಡಿಗೆ ಹಾಗೂ ಸೈಕಲ್ ನಲ್ಲಿ ಮೆರವಣಿಗೆ ನಡೆಸಿ ಗಮನ ಸೆಳೆದರು.

ಜಾಗತಿಕ ತಾಪಮಾನ ಏರಿಕೆ ಸಂಬಂಧ ಜಾಗೃತಿ ಮೂಡಿಸಲು ಆಯೋಜಿಸಿದ್ದ ಜಾಥಾದಲ್ಲಿ ನೂರಾರು ಮಂದಿ ಕಾಲ್ನಡಿಗೆ ಮತ್ತು ಸೈಕಲ್ ಜಾಥಾದಲ್ಲಿ ಭಾಗವಹಿಸಿ ಅರಿವು ಮೂಡಿಸಿದರು.

ಹಲವು ಕಾರಣಗಳಿಂದಾಗಿ ದಿನದಿಂದ ದಿನಕ್ಕೆ ಜಾಗತಿಕ ತಾಪಮಾನ ಏರಿಕೆಯಾಗುವ ಮೂಲಕ ನಾನಾ ರೀತಿಯ ದುಷ್ಪರಿಣಾಮಗಳಾಗುತ್ತಿವೆ. ಮುಖ್ಯವಾಗಿ ನಮ್ಮ ಭೂಮಿ, ನಮ್ಮ ಪರಿಸರ ಮಾಲಿನ್ಯವಾಗುತ್ತಿದ್ದು, ಜೀವ ಸಂಕುಲದ ಮೇಲೆ ದುಷ್ಪರಿಣಾಮವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭೂ ದಿನಾಚರಣೆ, ಸಾಂಕೇತಿಕ ಆಚರಣೆಯಾಗದೆ, ಗಂಭೀರವಾದ ಸಂದೇಶ ಕೊಡುವಂತಾಗಬೇಕು ಎಂದು ವಿಜಯ ಪ್ರಕಾಶ್‌ ಹೇಳಿದರು.

ಭೂಮಿ ಉಳಿಸುವ, ಸಂರಕ್ಷಿಸುವ ಕೆಲಸಕ್ಕೆ ನಾವೆಲ್ಲರೂ ಸನ್ನದ್ಧರಾಗಿ, ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಇದಕ್ಕೆ ಸ್ಪಂದಿಸಿ ಅನೇಕರು, ಕಾಲ್ನಡಿಗೆ ಇಲ್ಲವೇ ಸೈಕಲ್ ಏರಿ ಕಚೇರಿ ಹಾಗೂ ನಿತ್ಯದ ಕೆಲಸ ಕಾರ್ಯ ಮಾಡಿಕೊಂಡರು.

‘ಜಾಗತಿಕ ತಾಪಮಾನ ಏರಿಕೆಗೆ ಹಮಾಮಾನ ವೈಪರೀತ್ಯ ಕಾರಣವಾಗಿದ್ದು, ಇದರಿಂದ ಅನೇಕ ಜೀವ ಸಂಕುಲ ವೇಗವಾಗಿ ನಶಿಸುತ್ತಿವೆ. ಅಪರೂಪದ ಪ್ರಬೇಧಗಳು ಅಳಿಯುತ್ತಿವೆ. ತಾಪಮಾನ ಏರಿಕೆಗೆ ಪಳೆಯುಳಿಕೆ ಇಂಧನಗಳ ಮಿತಿ ಮೀರಿದ ಬಳಕೆಯೂ ಕಾರಣವಾಗಿದ್ದು, ಇದನ್ನು ತಡೆಗಟ್ಟಲು ಭೂಮಿಯ ಹಸಿರೀಕರಣ ಮಾಡಬೇಕು. ಜಲ ಸಂರಕ್ಷಣೆ ಮಾಡಬೇಕು. ಆ ಮೂಲಕ ಪರಿಸರ ಸ್ನೇಹಿ ಜೀವನ ನಡೆಸೋಣ’ ಎಂದು ಪ್ರಧಾನ ಜಿಲ್ಲಾ ಮತ್ತು ಸೇಷನ್ಸ್‌ ನ್ಯಾಯಾಧೀಶ ತಿಮ್ಮಣ್ಣಾಚಾರ್‌ ಪ್ರಮಾಣ ವಚನ ಬೋಧಿಸಿದರು.

ಜಿಲ್ಲಾಡಳಿತದ ಬಹುಮಂದಿ ಅಧಿಕಾರಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ನಂತರ ವಿಶ್ವ ಭೂ ದಿನ ಮೆರವಣಿಗೆ ಹೇಮಾವತಿ ಪ್ರತಿಮೆ ಬಳಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಈ ವೇಳೆ ಪರಿಸರ ಸಂಕ್ಷರಣೆ ಸಂಬಂಧ ಜಾಗೃತಿ ಫಲಕ ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT