ಕೊಣನೂರು: ಹೋಬಳಿಯ ರಾಮನಾಥಪುರ ಸಮೀಪದ ಮಲ್ಲರಾಜಪಟ್ಟಣದಲ್ಲಿರುವ ಪುರಾಣ ಪ್ರಸಿದ್ಧ ಲಕ್ಷ್ಮಣೇಶ್ವರ ದೇವಾಲಯದಲ್ಲಿ ಗುರುವಾರ ಲಕ್ಷದೀಪೋತ್ಸವ ಭಕ್ತರ ಸಡಗರ, ಸಂಭ್ರಮ ನಡುವೆ ಜರುಗಿತು.
ಲಕ್ಷದೀಪೋತ್ಸವದ ಅಂಗವಾಗಿ ದೇವಾಲಯದಲ್ಲಿ ಬೆಳಗಿನಿಂದಲೇ ವಿವಿಧ ಅಭಿಷೇಕ ಮತ್ತು ಹೋಮ ಹವನಗಳು ಜರುಗಿದವು.
ಸಂಜೆ ಆಗುತ್ತಿದ್ದಂತೆ ದೇವಾಲಯದ ಆವರಣದಲ್ಲಿ ಸೇರಿದ ಸಹಸ್ರಾರು ಭಕ್ತರು ದೇಗುಲದ ಆವರಣ, ಮೆಟ್ಟಿಲಿನ ಮೇಲೆ ದೀಪ ಬೆಳಗಿಸಿದರು.
ದೀಪಗಳ ಬೆಳಕು, ಹೂವಿನ ಅಲಂಕಾರ ಹಾಗೂ ಆವರಣದಲ್ಲಿ ಬಿಡಿಸಿದ್ದ ಚಿತ್ತಾಕರ್ಷಕ ರಂಗೋಲಿಗಳು ದೇವಾಲಯದ ಅಂದವನ್ನು ಮತ್ತಷ್ಟು ಹೆಚ್ಚಿಸಿದ್ದವು. ದೀಪೋತ್ಸವವನ್ನು ಭಕ್ತರು ನೋಡಿ ಆನಂದಿಸಿದರು.
ಲಕ್ಷ್ಮಣೇಶ್ವರ ಮತ್ತು ಉರ್ಮಿಳಾ ದೇವಿಯವರ ವಿಗ್ರಹಗಳಿಗೆ ಮಾಡಿದ್ದ ಹೂವಿನ ಅಲಂಕಾರ ಭಕ್ತರ ಮನಸೆಳೆಯಿತು. ಸೇರಿದ್ದ ಜನಸಮೂಹ ಅಲಂಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ದೀಪೋತ್ಸವ ಕಾರ್ಯಕ್ರಮಗಳನ್ನು ಎಲ್.ಐ.ಸಿ ಪ್ರತಿನಿಧಿ ರುದ್ರಪಟ್ಟಣ ರಮೇಶ್ ಪ್ರಾಯೋಜಿಸಿದ್ದರು.
ಅರಕಲಗೂಡು ಮತ್ತು ಹೊಳೆನರಸೀಪುರ ಜೀವವಿಮಾ ನಿಗಮ ಶಾಖೆಯ ಅಧಿಕಾರಿಗಳು, ವ್ಯವಸ್ಥಾಪಕ ಕಾಂತರಾಜು ಸೇರಿದಂತೆ ರಾಮನಾಥಪುರ, ಮಲ್ಲರಾಜಪಟ್ಟಣ, ಮಲ್ಲಿನಾಥಪುರ, ಗಂಗೂರು ಮತ್ತು ಸುತ್ತಮುತ್ತಲಿನ ಅನೇಕ ಗ್ರಾಮಗಳ ಭಕ್ತರು ದೀಪ ಬೆಳಗಿಸಿ ಭಕ್ತಿ ಸಮರ್ಪಿಸಿದರು.