ಬೇಲೂರು: ಸರ್ಕಾರದ ಎಂಎಸ್ಐಎಲ್ ಸೇರಿದಂತೆ ಇತರೆ ಮದ್ಯದ ಅಂಗಡಿಗಳಲ್ಲಿ ಮದ್ಯಕ್ಕೆ ಎಂ.ಆರ್.ಪಿಗಿಂತ ಹೆಚ್ಚಿನ ಹಣವನ್ನು ಪಡೆಯುತ್ತಿದ್ದರೂ ಅಬಕಾರಿ ಇಲಾಖೆ ಕಣ್ಮುಚಿ ಕುಳಿತಿದೆ ಎಂದು ಮದ್ಯಪಾನ ಪ್ರಿಯರ ಹೋರಾಟ ಸಮಿತಿಯ ಆಕ್ರೋಶ ವ್ಯಕ್ತಪಡಿಸಿದೆ.
ಸಮಿತಿ ತಾಲ್ಲೂಕು ಘಟಕದಿಂದ ಅಬಕಾರಿ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಲಾಯಿತು. ಮದ್ಯ ಮಾರಾಟಗಾರರೊಂದಿಗಿನ ಅಬಕಾರಿ ಅಧಿಕಾರಿಗಳ ಒಳ ಒಪ್ಪಂದದಿಂದಾಗಿ ಹಲವಾರು ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಮದ್ಯದಂಗಡಿಗಳಲ್ಲಿ ಸ್ವಚ್ಛತೆ ಕಾಪಾಡಿ, ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂದು ಒತ್ತಾಯಿಸಿದರು.
ಕುಶಾವರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಜಯಂತಿ ಮಾತನಾಡಿ, ಗ್ರಾಮಗಳಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟದಿಂದ ಬಡ ಕುಟುಂಬಗಳು ಬೀದಿಗೆ ಬರುತ್ತಿದ್ದು, ಗಲಾಟೆ, ಘರ್ಷಣೆಗಳು ನಡೆಯುತ್ತಿವೆ. ಇದೆಲ್ಲದಕ್ಕೂ ಕಾರಣ ಮದ್ಯದ ಅಂಗಡಿಗಳು, ಆದ್ದರಿಂದ ಇಂತಹ ಅಂಗಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಬಡ ಕುಟುಂಬಗಳನ್ನು ರಕ್ಷಿಸಬೇಕು ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಅಬಕಾರಿ ಇನ್ಸ್ಪೆಕ್ಟರ್ ದೀಪಕ್, ಅಬಕಾರಿ ನಿಯಮ ಮೀರುವ ಬಾರ್ಗಳ ವಿರುದ್ಧ ಕ್ರಮಕ್ಕಾಗಿ ಮೇಲಾಧಿಕಾರಿಗೆ ಪತ್ರ ಬರೆದಿದ್ದೇವೆ. ಜತೆಗೆ 7 ಕ್ಕೂ ಅಧಿಕ ಕೇಸುಗಳನ್ನು ದಾಖಲಿಸಿ ಕ್ರಮ ಕೈಗೊಂಡಿದ್ದೇವೆ ಎಂದರು.
ಮದ್ಯಪಾನ ಪ್ರಿಯರ ಹೋರಾಟ ಸಮಿತಿಯ ತಾಲ್ಲೂಕು ಘಟಕದ ಉಪಾಧ್ಯಕ್ಷ ಧರ್ಮಗೌಡ (ಸುಂಕ), ಭಾಗ್ಯ, ಸವಿತಾ, ಕುಸುಮ, ಅರುಣಾ ಕೌರಿ, ಮುನಿಸ್ವಾಮಿ, ಗಿರೀಶ್, ದೀಪು ಇದ್ದರು.