ಅರಕಲಗೂಡು: ತಾಲ್ಲೂಕಿನಲ್ಲಿ ಗುರುವಾರ ಮುಂಗಾರು ಚುರುಕಾಗಿದೆ.
ಮಳೆಯಿಂದಾಗಿ ಪಟ್ಟಣದಲ್ಲಿ ಬೀದಿ ವ್ಯಾಪಾರಿಗಳು ಕಿರಿ ಕಿರಿ ಅನುಭವಿಸಿದರು. ದಿನವಹಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಮಳೆಯಲ್ಲೇ ಸರಕು ಮಾರಾಟ ಮಾಡಿದರು. ವ್ಯಾಪಕ ಮಳೆಗೆ ಒಣಗುತ್ತಿದ್ದ ಬೆಳೆಗಳಿಗೆ ಜೀವ ಕಳೆ ಬಂದಂತಾಗಿದೆ. ಕೆಲ ದಿನಗಳಿಂದ ಮೋಡ ಕವಿದು ಬೀಳುತ್ತಿದ್ದ ತುಂತುರು ಮಳೆ ರೈತರಲ್ಲಿ ನಿರಾಸೆ ಮೂಡಿಸಿತ್ತು. ಇಂದು ಬೆಳಗ್ಗೆಯಿಂದಲೇ ಸೋನೆ ಮಳೆ ಬೀಳುತ್ತಿದ್ದು ಬಿಸಿಲಿಗೆ ಬಾಡಿದ್ದ ಬೆಳೆಗಳು ಚೇತರಿಕೆ ಕಾಣಲಾರಂಭಿಸಿವೆ.
ಪ್ರಮುಖ ವಾಣಿಜ್ಯ ಬೆಳೆಗಳಾದ ತಂಬಾಕು, ಆಲೂಗಡ್ಡೆ, ಶುಂಠಿ, ಮುಸುಕಿನ ಜೋಳದ ಬೆಳೆಗಳು ಮಳೆಯಿಲ್ಲದೆ ಬಹುತೇಕ ಒಣಗಲಾರಂಭಿಸಿದ್ದವು. ರೈತರಿಗೆ ತಂಬಾಕು ಇಳುವರಿ ಕುಂಠಿತಗೊಂಡು ನಷ್ಟಕ್ಕೊಳಗಾಗುವ ಆತಂಕ ಕಾಡಿತ್ತು. ಇದೀಗ ಎಡಬಿಡದೆ ಬಿದ್ದ ಮಳೆಗೆ ಬೆಳೆಗಳು ಚೇತರಿಸಿಕೊಳ್ಳುವ ಆಶಾಭಾವನೆ ರೈತರಲ್ಲಿ ಮೂಡಿದೆ.
ಮುಂಗಾರು ತಡವಾದ ಕಾರಣ ಬೆಳೆ ಬೆಳವಣಿಗೆಗೆ ಹೊಡೆತ ಬಿದ್ದಿತ್ತು. ಈಗ ಮಳೆಯಾದ ಕಾರಣ ಅಲ್ಪಸ್ವಲ್ಪ ಫಸಲು ಕೈಸೇರಲಿದೆ ಎನ್ನುತ್ತಾರೆ ರೈತರು.
ಕೃಷಿ ಚಟುವಟಿಕೆ ಚುರುಕು: ವರ್ಷಧಾರೆಗೆ ಹರ್ಷಗೊಂಡ ರೈತರು ಕೃಷಿ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ. ಮುಸುಕಿನ ಜೋಳ, ಆಲೂಗಡ್ಡೆ ಮತ್ತಿತರ ದ್ವಿದಳ ಧಾನ್ಯ ಬೆಳೆಗಳ ಬಿತ್ತನೆ ಕಾರ್ಯ ನಡೆಸಲು ಮಳೆ ಅನುಕೂಲಕರವಾಗಿದೆ. ಕೊಡಗಿನಲ್ಲಿ ಮಳೆಯಿಂದಾಗಿ ಹಾರಂಗಿ ಜಲಾಶಯಕ್ಕೆ ಒಳ ಹರಿವು ಹೆಚ್ಚಿದ್ದು ಡ್ಯಾಂನಲ್ಲಿ ನೀರು ಹೊರ ಬಿಟ್ಟಿರುವುದರಿಂದ ಕಾವೇರಿ ನದಿಯಲ್ಲಿ ಹರಿಯುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.