ಕೊಣನೂರು: ಅರಣ್ಯದ ಸ್ವಚ್ಛ, ಸುಂದರ ಪರಿಸರದಲ್ಲಿ ಕಾಲೇಜು ವಿದ್ಯಾರ್ಥಿಗಳು ತಿರುಗಾಡುತ್ತಾ ಸಸ್ಯಸಂಕುಲ ಮತ್ತು ವನ್ಯಜೀವಿಗಳ ಬಗ್ಗೆ ಮಾಹಿತಿ ಪಡೆದರು.
ಕೊಣನೂರು ಬಿ.ಎಂ.ಶೆಟ್ಟಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕವು ಗೊಬ್ಬಳಿಕಾವಲ್ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದ ಶಿಬಿರಾರ್ಥಿಗಳು ಮಾನವ ಮತ್ತು ವನ್ಯಜೀವಿಗಳ ಸಂಘರ್ಷ ಕುರಿತು ತಿಳಿಯಲು ಮಂಗಳವಾರ ಮಧ್ಯಾಹ್ನ ಗೊಬ್ಬಳಿಕಾವಲ್ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ್ದರು.
ವಲಯ ಅರಣ್ಯಾಧಿಕಾರಿ ವಿನಯ್ ಚಂದ್ರ ನೇತೃತ್ವದಲ್ಲಿ ಅರಣ್ಯ ಪ್ರದೇಶಕ್ಕೆ ತೆರಳಿದ 50 ಶಿಬಿರಾರ್ಥಿಗಳ ತಂಡವು ಕಾಡಿನ ಹಲವೆಡೆ ಸುತ್ತಾಡುತ್ತಾ ಸಸ್ಯವರ್ಗ, ಔಷಧೀಯ ಸಸ್ಯಗಳು, ಬೆಲೆಬಾಳುವ ಮರಗಳು ಹಾಗೂ ವನ್ಯಜೀವಿಗಳ ಬಗ್ಗೆ ತಿಳಿದುಕೊಂಡರು. ಪ್ರಾಣಿಗಳನ್ನು ವೀಕ್ಷಿಸಿ ಪುಳಕಿತರಾದರು.
ಕೆಎಫ್ಡಿಫ್ ಯೋಜನೆಯಡಿ 25 ಹೆಕ್ಟೇರ್ ಪ್ರದೇಶದಲ್ಲಿ ನೆಟ್ಟಿರುವ ಹೊನ್ನೆ, ಬೀಟೆ, ಕೂಳಿ, ಮುತ್ತುಗ, ಹಿಪ್ಪೆ, ನೇರಳೆ, ಹತ್ತಿ, ಆಲದ ಮರಗಳನ್ನು ವೀಕ್ಷಿಸಿದರು. ಅವುಗಳ ಉಪಯೋಗಗಳ ಬಗ್ಗೆ ಮಾಹಿತಿ ಪಡೆದರು.
ವಲಯ ಅರಣ್ಯಾಧಿಕಾರಿ ವಿನಯ್ ಚಂದ್ರ ಮಾತನಾಡಿ, ‘ವನ್ಯಜೀವಿ ಮತ್ತು ಮಾನವನ ನಡುವಿನ ಸಂಘರ್ಷಕ್ಕೆ ಮನುಷ್ಯನೇ ಮೂಲ ಕಾರಣ. ವಿವಿಧ ಉದ್ದೇಶಗಳಿಂದ ಕಾಡನ್ನು ನಾಶ ಮಾಡುತ್ತಿದ್ದಾರೆ. ಇದರಿಂದ ವನ್ಯಜೀವಿಗಳಿಗೆ ತೊಂದರೆ ಉಂಟಾಗುತ್ತಿದೆ. ವನ್ಯಜೀವಿಗಳು ಆಹಾರ ಅರಸಿ ನಾಡಿಗೆ ಲಗ್ಗೆ ಇಡುತ್ತಿವೆ. ಜನವಸತಿ ಪ್ರದೇಶಕ್ಕೆ ಬಂದ ವನ್ಯಜೀವಿ ಗಳನ್ನು ಗಾಬರಿಗೊಳಿಸಬಾರದು. ಅವುಗಳ ಪಾಡಿಗೆ ಬಿಟ್ಟರೆ, ಕಾಡಿಗೆ ಹೋಗುತ್ತವೆ’ ಎಂದು ತಿಳಿಸಿದರು.
ಪ್ರಾಂಶುಪಾಲ ಬಸವರಾಜ, ಕಾಲೇಜು ಕಾರ್ಯಾಧ್ಯಕ್ಷ ಎಸ್.ಸಿ.ಚೌಡೇಗೌಡ, ಶಿಬಿರಾಧಿಕಾರಿ ಶಂಕರಪ್ಪ, ಅಧ್ಯಾಪಕ ರವಿ, ಪ್ರಕಾಶ್, ಪ್ರತಾಪ್, ಅರಣ್ಯ ಇಲಾಖೆಯ ರಾಘವೇಂದ್ರ ಇದ್ದರು.