ಹಾಸನ: ‘ರಾಗಿ ಖರೀದಿ ಪ್ರಮಾಣ ಹೆಚ್ಚಿಸಬೇಕು ರೈತರ ಬೇಡಿಕೆ ಬಗ್ಗೆ ಕೇಂದ್ರಸರ್ಕಾರ ಚಿಂತನೆ ನಡೆಸಿದೆ. ಖರೀದಿ ಕೇಂದ್ರ ಆರಂಭಿಸುವ ಬಗ್ಗೆ ರಾಜ್ಯಸರ್ಕಾರದ ಜತೆ ಚರ್ಚಿಸಲಾಗುವುದು’ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಕಾರೆಕೆರೆ ಕೃಷಿ ಕಾಲೇಜಿನ ಕ್ರೀಡಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದಕರ್ನಾಟಕ ರೈತ ಸುರಕ್ಷತಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ‘ನನ್ನ ಪಾಲಿಸಿ ನನ್ನ ಕೈಯಲ್ಲಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ವಿಶ್ವಸಂಸ್ಥೆ ಸಹಯೋಗದಲ್ಲಿ ರಾಗಿ, ಸಿರಿಧಾನ್ಯಗಳಿಗೆ ಅಂತರರಾಷ್ಟ್ರೀಯವಾಗಿ ಮಾರುಕಟ್ಟೆ ಸೃಷ್ಟಿಸಲು ಒತ್ತು ನೀಡಲಾಗುವುದು. 2023ರೊಳಗೆ ಎಲ್ಲ ರಾಯಭಾರಿ ಕಚೇರಿಗಳಲ್ಲಿ ರಾಗಿ, ಜೋಳ, ಸಿರಿಧಾನ್ಯ ಪ್ರದರ್ಶನ ಮಾಡಲಾಗುವುದು’ ಎಂದು ಹೇಳಿದರು.
‘ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳು ಒಂದೊಂದು ಕಡೆ ಇವೆ. ರೈತರಿಗೆ ಕೃಷಿ, ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿಎರಡೂ ವಿಷಯಗಳ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಬೇಕು’ ಎಂದೂ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.
‘ರೈತರು ಗುಣಮಟ್ಟದ ಸಿರಿಧಾನ್ಯ ಬೆಳೆಯಬೇಕು. ರಾಸಾಯನಿಕಸಿಂಪಡಣೆ ಅವಧಿ, ಪ್ರಮಾಣ ಕುರಿತು ಕೃಷಿಅಧಿಕಾರಿಗಳು ಮತ್ತು ವಿಜ್ಞಾನಿಗಳು ರೈತರಿಗೆ ಅರಿವು ಮೂಡಿಸಬೇಕು’ ಎಂದು ಸಲಹೆ ಮಾಡಿದರು.