ಬೇಲೂರು: ಚನ್ನಕೇಶವಸ್ವಾಮಿ ಬ್ರಹ್ಮ ರಥೋತ್ಸವವು ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಈ ಬಾರಿಯೂ ದೊಡ್ಡಮೇದೂರು ಗ್ರಾಮದ ಖಾಜಿ ಸೈಯ್ಯದ್ ಸಜ್ಜಾದ್ ಬಾಷಾ ಖಾದ್ರಿಯವರು, ಕುರಾನ್ ಪಠಿಸದೇ, ಉರ್ದುವಿನಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.
ಸಂಪ್ರದಾಯದಂತೆ ರಥದ ಮುಂಭಾಗದಲ್ಲಿ ಖಾದ್ರಿಯವರು ಕುರಾನ್ ಪಠಿಸಿದ ನಂತರ, ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತಿತ್ತು. ಕಳೆದ ವರ್ಷ ವಿಶ್ವ ಹಿಂದೂ ಪರಿಷತ್ನಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಕುರಾನ್ ಪಠಿಸಿರಲಿಲ್ಲ.
ಈ ಬಾರಿಯೂ ದಿವ್ಯ ಬ್ರಹ್ಮ ರಥೋತ್ಸವ ಪ್ರಾರಂಭಕ್ಕೂ ಮುನ್ನ ದೇಗುಲದ ಒಳ ಆವರಣದ ಕಲ್ಯಾಣಿ ಸಮೀಪದ ನೆಲಹಾಸಿನ ಮೇಲೆ ನಿಂತು ಖಾದ್ರಿಯವರು ಪ್ರಾರ್ಥನೆ ಸಲ್ಲಿಸಿದರು.
ಶನಿವಾರ ಬೆಳಿಗ್ಗೆ ಚನ್ನಕೇಶವ ಸ್ವಾಮಿಯ ಉತ್ಸವ ಮೂರ್ತಿಯನ್ನು ದೇಗುಲದ ಅಷ್ಟ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ದೇಗುಲದ ಮುಂಭಾಗದಲ್ಲಿರುವ ಬಾವಿಕಟ್ಟೆ ಸಮೀಪ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ ವಿಶೇಷ ಪೂಜೆ ಸಲ್ಲಿಸಿದ ಅರ್ಚಕರು ವೇದ ಘೋಷಗಳನ್ನು ಮೊಳಗಿಸಿದರು.
ನಂತರ ಮೂರ್ತಿಯನ್ನು ರಥದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿಸಿ ರಥದದಲ್ಲಿ ಕುಳ್ಳಿರಿಸಲಾಯಿತು. ಬೆಳಿಗ್ಗೆ 10.45 ರಿಂದ 11.15 ರವರೆಗೆ ರಥೋತ್ಸವ ನಡೆಯಿತು.