ಹಾಸನ: ‘ಜಿಲ್ಲೆಯಲ್ಲಿ ಮಳೆಯಿಂದಾಗಿರುವ ನಷ್ಟದ ಬಗ್ಗೆ ಅಧಿಕಾರಿಗಳು ಸರ್ವೆ ನಡೆಸಿ, ತಕ್ಷಣ ಸರ್ಕಾರಕ್ಕೆ ವರದಿ ಸಲ್ಲಿಸ ಬೇಕು’ ಮಾಜಿ ಸಚಿವ ಎಚ್.ಡಿ.ರೇವಣ್ಣ ಸೋಮವಾರ ಹಾಸನದಲ್ಲಿ ಒತ್ತಾಯಿಸಿದರು.
‘ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ಮಳೆಯಾಗುತ್ತಿದೆ. ಕೃಷಿ ಇಲಾಖೆಯವರನ್ನು ಕೇಳಿದ್ರೆ ಕೇವಲ 100 ಎಕರೆ ನಷ್ಟವಾಗಿದೆ ಅಂತಾರೆ. ಇವರು ಯಾವ ರೀತಿಯ ಸರ್ವೆ ಮಾಡ್ತಾರೋ ಗೊತ್ತಾಗ್ತಾ ಇಲ್ಲ. ನನ್ನ ಪ್ರಕಾರ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾಳಾಗಿದೆ. 500 ಕ್ಕೂ ಹೆಚ್ಚು ಮನೆಗಳು ಬಿದ್ದು ಹೋಗಿವೆ’ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಜಿಲ್ಲೆಯಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಮನೆಗಳು ಬಿದ್ದಿರುವ ಜಾಗಕ್ಕೆ ಹೋಗ್ತಿಲ್ಲ. ಜಿಲ್ಲೆಯಲ್ಲಿ ಮಳೆಯಿಂದ ಎಷ್ಟು ನಷ್ಟವಾಗಿದೆ ಎಂದು ಸರ್ವೆ ಮಾಡಿಸಿ, ಸರ್ಕಾರಕ್ಕೆ ವರದಿ ನೀಡಬೇಕು’ ಮನವಿ ಮಾಡಿದರು.
‘ಅಬಕಾರಿ ಲೈಸೆನ್ಸ್ ರಿನೀವಲ್ ಮಾಡುವುದಕ್ಕೆ ಅಧಿಕಾರಿಗಳು ₹30 ಲಕ್ಷ ಪಡೆದಿದ್ದಾರೆ ಎಂದು ದೂರಿದ ರೇವಣ್ಣ, ಜಿಲ್ಲೆಯಲ್ಲಿ ಹೇಳೋರು ಕೇಳೋರು ಯಾರೂ ಇಲ್ಲದಂತಾಗಿದೆ. ಕೆಲವರು ಅಬಕಾರಿ ಇಲಾಖೆಯಲ್ಲಿ ಏಜೆಂಟರಿದ್ದಾರೆ ಎಂದು ಕಿಡಿ ಕಾರಿದರು.
ಜಿಲ್ಲಾಧಿಕಾರಿಗಳು ಎಲ್ಲಾ ಶಾಸಕರನ್ನೂ ಗಣನೆಗೆ ತೆಗೆದುಕೊಳ್ಳಿ. ಎಲ್ಲರ ಅಭಿಪ್ರಾಯ ವನ್ನೂ ಪಡೆದುಕೊಳ್ಳಿ ಎಂದು ಒತ್ತಾಯಿಸಿದರು.