ಹಾಸನ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದ ಅಭ್ಯರ್ಥಿ ಎಂದೇ ಬಿಂಬಿತರಾಗಿರುವ ಜೆಡಿಎಸ್ ಯುವ ನಾಯಕ ಪ್ರಜ್ವಲ್ ರೇವಣ್ಣ ಅವರು ಪಕ್ಷದ ಕೆಲಸಕ್ಕೆ ಸರ್ಕಾರಿ ಕಾರು ಬಳಸಿದ್ದಾರೆ.
ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡ್ ಗಳಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿದ ಪ್ರಜ್ವಲ್, ಪಕ್ಷದ ಕೆಲಸಕ್ಕೆ ಸರ್ಕಾರಿ ಕಾರು ಬಳಕೆ ಮಾಡುವ ಮೂಲಕ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
‘ಪ್ರಜ್ವಲ್ ಅವರ ಕಾರು ದಿಢೀರ್ ಕೆಟ್ಟಿದ್ದರಿಂದ, ಅನಿವಾರ್ಯವಾಗಿ ಅಧಿಕಾರಿಗಳ ಕಾರು ಬಳಕೆ ಮಾಡಿದ್ದಾರೆ. ಇದರಲ್ಲಿ ಯಾವುದೇ ದುರುದ್ದೇಶ ಇಲ್ಲ’ ಎಂದು ಜೆಡಿಎಸ್ ವಕ್ತಾರ ರಘು ಹೊಂಗೆರೆ ಸ್ಪಷ್ಟಪಡಿಸಿದರು.
ಸಂಸದ ಎಚ್.ಡಿ.ದೇವೇಗೌಡರು ಲೋಕಸಭೆ ಚುನಾವಣೆಯಲ್ಲಿ ಎಲ್ಲಿಂದ ಸ್ಪರ್ಧೆ ಮಾಡುತ್ತಾರೆ ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಅವರ ಬದಲಿಗೆ ಮೊಮ್ಮಗ ಹಾಗೂ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರು ಚುನಾವಣಾ ಅಖಾಡಕ್ಕಿಳಿಯುತ್ತಾರೆ ಎಂಬ ಸುದ್ದಿ ದಟ್ಟವಾಗಿದೆ.
ಇದೇ ಕಾರಣಕ್ಕೆ ಹಾಸನ ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡ್ ಗಳಲ್ಲಿ ಜನರ ಸಮಸ್ಯೆ ಆಲಿಸುವ ನೆಪದಲ್ಲಿ ಸರಣಿ ಸಭೆ ನಡೆಸುತ್ತಿರುವ ಪ್ರಜ್ವಲ್, ಮತದಾರರ ಮನಗೆಲ್ಲುವ ಕಾರ್ಯಕ್ಕೆ ಕೈ ಹಾಕಿದ್ದಾರೆ.
ಪ್ರಜ್ವಲ್ ಸಭೆ ನಡೆಸಿದ ಕಡೆಯಲ್ಲಾ ಕೆಎ-01, ಜಿಎ-8009 ಸಂಖ್ಯೆಯ ಸರ್ಕಾರಿ ಕಾರಿನಲ್ಲೇ ಓಡಾಡಿದ್ದು , ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಮತ್ತು ಟೀಕೆಗೆ ಗುರಿಯಾಗಿದೆ.
‘ನಾನು ಜನರ ಸಮಸ್ಯೆ ಆಲಿಸಲು ಸಭೆ ಮಾಡುತ್ತಿದ್ದೇನೆ. ಚುನಾವಣೆಗಾಗಿ ಅಲ್ಲ’ ಎಂದು ಪ್ರಜ್ವಲ್ ಹೇಳಿದರು.