ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಸೇವೆಗೆ ಸಜ್ಜಾಗಿರುವ ಸಂಚಾರಿ ಪಶು ಚಿಕಿತ್ಸಾ ಆಂಬುಲೆನ್ಸ್‌

1962 ಗೆ ಕರೆ ಮಾಡಿದರೆ ಸ್ಥಳಕ್ಕೆ ಬರುವ ವಾಹನ
Last Updated 2 ಸೆಪ್ಟೆಂಬರ್ 2020, 13:23 IST
ಅಕ್ಷರ ಗಾತ್ರ

ಹಾಸನ: ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಸುಸಜ್ಜಿತ ಸಂಚಾರಿ ಪಶು ಚಿಕಿತ್ಸಾ ಆಂಬುಲೆನ್ಸ್‌ ಅನ್ನು ಗುರುವಾರ ಸಾರ್ವಜನಿಕ
ಸೇವೆಗೆ ಸರ್ಮಪಿಸಲಾಗುತ್ತಿದೆ.

ಜಾನುವಾರುಗಳಿಗೆ ಪಶು ವೈದ್ಯಕೀಯ ಸೇವೆ ನೀಡಲು ₹ 15.58 ಲಕ್ಷ ವೆಚ್ಚದ ಆಂಬುಲೆನ್ಸ್ ಅನ್ನು ಅರಕಲಗೂಡು
ಪಶುವೈದ್ಯಕೀಯ ಪಾಲಿಕ್ಲಿನಿಕ್‌ ಗೆ ಒದಗಿಸಲಾಗುತ್ತಿದೆ. ಆಂಬಲೆನ್ಸ್‌ನಲ್ಲಿ ಶಸ್ತ್ರಚಿಕಿತ್ಸಾ ಘಟಕ, ಪ್ರಯೋಗ ಶಾಲೆ, ಸ್ಕ್ಯಾನಿಂಗ್‌ ಉಪಕರಣ ಅಳವಡಿಕೆ ಜಾಗ, 250 ಲೀಟರ್‌ ಸಾಮರ್ಥ್ಯದ ನೀರಿನ ಟ್ಯಾಂಕ್, 200 ಕೆ.ಜಿ ತೂಕ ಸಾಮರ್ಥ್ಯದ ಶಸ್ತ್ರ ಚಿಕಿತ್ಸಾ ಟೇಬಲ್‌, ಎಸಿ ವ್ಯವಸ್ಥೆ, ಪಶುವೈದ್ಯರು ಮತ್ತು ಸಿಬ್ಬಂದಿ ಕುಳಿತುಕೊಳ್ಳಲು ಆಸನ, ವಾಷ್‌ ಬೇಸಿನ್‌, ಮರಣೋತ್ತರ ಪರೀಕ್ಷೆ ಉಪಕರಣ ಕಿಟ್ ಮತ್ತು ಇತರ ಉಪಕರಣ ಇಡಲು ಕಪಾಟು ಮಾಡಲಾಗಿದೆ.

ಸೆ.3 ರ ಮಧ್ಯಾಹ್ನ 3ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ಪಶು ಸಂಜೀವಿನ ವಾಹನವನ್ನು ಲೋಕಾರ್ಪಣೆ ಮಾಡಲಿದ್ದಾರೆ. 2019–20ನೇ ಸಾಲಿನ ಬಜೆಟ್‌ನಲ್ಲಿ ನಿಗದಿಪಡಿಸಿರುವ ಅನುದಾನ ಮತ್ತು ಇತರೆ ಅನುದಾನದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ.

ಸಾಮಾನ್ಯವಾಗಿ ಜಾನುವಾರುಗಳಿಗೆ ಎದುರಾಗುವ ವಿಷಪ್ರಾಶನ, ಹೊಟ್ಟೆ ಉಬ್ಬರ, ಉಸಿರುಗುಟ್ಟುವುದು, ಅಪಘಾತ, ಮೂಳೆ ಮುರಿತ, ಬೆಬಿಸಿಯೋಸಿಸ್‌, ಅಂಥ್ರಾಕ್ಸ್, ಚಪ್ಪೆರೋಗ, ಗಳಲೆ ರೋಗ, ಹಾಲು ಜ್ವರ, ಕೆಚ್ಚಲ ಬಾವು ಹಾಗೂ ಸಾಧಾರಣ ಚಿಕಿತ್ಸೆಗೆ ಸ್ಪಂದಿಸದ ಸಮಯದಲ್ಲಿ ಸುಸಜ್ಜಿತ ಸಂಚಾರಿ ಪಶು ಶಸ್ತ್ರಚಿಕಿತ್ಸಾ ವಾಹನಗಳ ಮೂಲಕ ರೈತರ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡಲಾಗುತ್ತದೆ.

‘ತುರ್ತು ಮತ್ತು ತಜ್ಞ ಪಶುವೈದ್ಯಕೀಯ ಸೇವೆ ನೀಡುವುದರಿಂದ ಜಾನುವಾರುಗಳ ಪ್ರಾಣ ಹಾನಿ ತಡೆಗಟ್ಟಿ, ರೈತರಿಗೆ
ಆರ್ಥಿಕ ನಷ್ಟ ತಪ್ಪಿಸಬಹುದಾಗಿದೆ. ವಾಹನವನ್ನು ಉಪಯೋಗಿಸಿಕೊಂಡು ವಾರದಲ್ಲಿ ಒಂದು ದಿನ ಶಸ್ತ್ರಚಕಿತ್ಸಾ ತಜ್ಞರು, ಪ್ರಸೂತಿ ತಜ್ಞರು ಬರಡು ರಾಸುಗಳ ಚಿಕಿತ್ಸಾ ಶಿಬಿರ ಮತ್ತು ಅನುಪಾಲನಾ ಶಿಬಿರಗಳಲ್ಲಿ ಭಾಗವಹಿಸಿ ಸೇವೆ ನೀಡಲಿದ್ದಾರೆ’ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ರಮೇಶ್‌ ಮಾಹಿತಿ ನೀಡಿದ್ದಾರೆ.

‘ತಜ್ಞ ಪಶುವೈದ್ಯಕೀಯ ಸೇವೆ ನೀಡುವುದರಿಂದ ಜಾನುವಾರುಗಳ ಪ್ರಾಣ ಹಾನಿಯನ್ನು ತಡೆಗಟ್ಟಿ, ರೈತರ ಆರ್ಥಿಕ ಹೊರೆ ತಗ್ಗಿಸಬಹುದು. ಪಶುಪಾಲಕರ ಸಹಾಯವಾಣಿ 1962 ಗೆ ಕರೆ ಮಾಡಿದರೆ ಆಂಬುಲೆನ್ಸ್‌ ಸ್ಥಳಕ್ಕೆ ಬರಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT