ಹಾಸನ: ನಗರ ಸಮೀಪದ ಹನುಮಂತಪುರದಲ್ಲಿ ಬಾಡಿಗೆ ಮನೆಯಲ್ಲಿ ಇಬ್ಬರು ವ್ಯಕ್ತಿಗಳು ಶವ ದೊರೆತಿದ್ದು, ಕುಡಿತ ಮತ್ತು ನಿದ್ದೆ ಮಾತ್ರೆ ಸೇವನೆಯಿಂದ ಮೃತಪಟ್ಟಿದ್ದಾರೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದರು .
ಉತ್ತರ ಪ್ರದೇಶದ ಕಾನ್ಪುರದ ನಬಾಬ್ (24 ), ರಾಮ್ ಸಜೀವನ್ (26) ಮೃತಪಟ್ಟ ವ್ಯಕ್ತಿಗಳು. ಇವರು ಸ್ಥಳೀಯ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದ್ದು, ಜುಲೈ 3 ರಂದು ನಗರಕ್ಕೆ ಬಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಜುಲೈ 14ರ ರಾತ್ರಿ ಅಲ್ಲಿನ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಾಗಿಲು ಒಡೆದು ಪರಿಶೀಲಿಸಿದಾಗ ಇಬ್ಬರು ಸಾವಿಗೀಡಾಗಿರುವುದು ತಿಳಿದುಬಂದಿದೆ.
ನಬೀಬ್ ಎಂಬುವವರು ಹಲವು ದಿನಗಳಿಂದ ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದರು. ಕುಡಿತದ ಚಟ ಹೊಂದಿದ್ದರು ಎಂದು ಮಾಹಿತಿ ಲಭ್ಯವಾಗಿದ್ದು, ರಾಮ್ ಸಜೀವನ್ ನಿತ್ಯ ನಿದ್ದೆ ಮಾತ್ರೆ ತೆಗೆದುಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.
ಅತಿಯಾದ ಕುಡಿತ ಹಾಗೂ ನಿದ್ದೆ ಮಾತ್ರೆಯಿಂದ ಇಬ್ಬರೂ ಮೃತಪಟ್ಟಿರುವುದು ವೈದ್ಯರು ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದಿದೆ. ಮರಣೋತ್ತರ ಪರೀಕ್ಷೆ ನಂತರ ನಿಖರವಾದ ಕಾರಣ ತಿಳಿಯಲಿದೆ ಎಂದು ಹರಿರಾಂ ಶಂಕರ್ ತಿಳಿಸಿದರು.