ಹಿನ್ನೆಲೆ: ಕ್ಷೇತ್ರಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ.ಚಿತ್ರದುರ್ಗದ ಪಾಳೇಗಾರ ವಂಶಕ್ಕೆ ಸೇರಿದ ತಿಮ್ಮಪ್ಪ ನಾಯಕ ತನ್ನ ಪರಿವಾರದೊಂದಿಗೆ ಆಂಧ್ರಪ್ರದೇಶದ ತಿರುಮಲ ಬೆಟ್ಟದ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆಂದು ಹೋಗುವ ಮಾರ್ಗ ಮಧ್ಯೆ ವಾಯುವಿಹಾರಕ್ಕೆಂದು ಅರಸೀಕೆರೆ ಸಮೀಪದ ಬೆಟ್ಟದ ತಪ್ಪಲಿನಲ್ಲಿರುವ ನಾಗಪುರಿ ಪಟ್ಟಣ (ಈಗ ಇಲ್ಲ) ದಲ್ಲಿ ರಾತ್ರಿ ವೇಳೆ ತಂಗುತ್ತಾನೆ. ರಾತ್ರಿ ತಿಮ್ಮಪ್ಪ ನಾಯಕನ ಕನಸಿನಲ್ಲಿ ಸ್ವಾಮಿ ಕಾಣಿಸಿಕೊಂಡು, ‘ತಿರುಮಲ ಬೆಟ್ಟಕ್ಕೆ ಹೋಗುವ ಅವಶ್ಯಕತೆ ಇಲ್ಲ. ಇದೇ ಬೆಟ್ಟದಲ್ಲಿ ದರ್ಶನ ನೀಡುವುದಾಗಿ’ ಅಶರೀರವಾಣಿ ನುಡಿದಿದೆ. ಬೆಳಿಗ್ಗೆ ಇಡೀ ಬೆಟ್ಟ ಹುಡುಕಿದರೂ ದೇವರ ದರ್ಶನ ಸಿಗಲಿಲ್ಲ. ಮತ್ತೆ ದೇವರಲ್ಲಿ ಪ್ರಾರ್ಥಿಸಿದಾಗ ಕನಸಿನಲ್ಲಿ ಕಾಣಿಸಿಕೊಂಡಸ್ವಾಮಿ, ‘ಈ ಬೆಟ್ಟದಲ್ಲಿ ತುಳಸಿಮಾಲೆ ಬಿಟ್ಟು ಹೋಗಿರುತ್ತೇನೆ. ಆ ತುಳಸಿಮಾಲೆ ಹಿಂಬಾಲಿಸಿಕೊಂಡು ಬಂದು, ಅದು ಎಲ್ಲಿ ಕೊನೆಗೊಂಡಿರುತ್ತದೋ ಅಲ್ಲಿ ನಿನಗೆ ದರ್ಶನ ನೀಡುತ್ತೇನೆ’ ಎಂದು ನುಡಿದಿದೆ. ತುಳಸಿಮಾಲೆ ಹಿಂಬಾಲಿಸಿಕೊಂಡು ಹೋದಾಗ ಬೆಟ್ಟದ ತುದಿಯಲ್ಲಿ ವಶಿಷ್ಠ ಮಹರ್ಷಿ ತಪಸ್ಸುಗೈದ ಸ್ಥಳದಲ್ಲೇ ಆಷಾಢ ಮಾಸದಲ್ಲಿ ತಿಮ್ಮಪ್ಪ ನಾಯಕನಿಗೆ ವೆಂಕಟರಮಣ ಸ್ವಾಮಿ ದರ್ಶನ ನೀಡಿದನಂತೆ. ದರ್ಶನಗೈದ ಸ್ಥಳದಲ್ಲೇ ತಿಮ್ಮಪ್ಪ ದೇವಾಲಯ ನಿರ್ಮಿಸಿದ. ಅಂದಿನಿಂದ ಈ ಬೆಟ್ಟಕ್ಕೆ ಮಾಲೇಕಲ್ ತಿರುಪತಿ ಎಂದು ನಾಮಾಂಕಿತವಾಯಿತು ಎಂಬ ಪ್ರತೀತಿ ಇದೆ.