ಆಲೂರು: ಸರ್ಕಾರ ಕೇವಲ ಗ್ಯಾರಂಟಿ ಹೆಸರಿನಲ್ಲಿ ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿದೆ ಎಂದು ಶಾಸಕ ಸಿಮೆಂಟ್ ಮಂಜು ಅಸಮಾಧಾನ ವ್ಯಕ್ತಪಡಿಸಿದರು.
ಅವರು ಕಗ್ಗರವಳ್ಳಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ದೇಶದ ಪ್ರತಿಯೊಬ್ಬ ನಾಗರಿಕರು ಶುದ್ಧ ನೀರು ಕುಡಿಯಬೇಕು ಎನ್ನುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಲಜೀವನ್ ಮಿಷನ್ ಯೋಜನೆ ಜಾರಿಗೆ ತಂದು, ಪ್ರತಿ ಗ್ರಾಮಗಳಿಗೂ ಶುದ್ಧ ನೀರುಣಿಸಲು ಮುಂದಾಗಿರುವುದು ಪ್ರಶಂಶನೀಯ ಎಂದರು.
ಅದರೆ ರಾಜ್ಯ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ಈವರೆಗೆ ಹಣ ಬಿಡುಗಡೆ ಮಾಡಿಲ್ಲ. ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಡಿ. 5 ರಿಂದ ನಡೆಯುವ ಚಳಿಗಾಲದ ಅದಿವೇಶನದಲ್ಲಿ ಅನುಮತಿ ಪಡೆದು, ಕ್ಷೇತ್ರದಲ್ಲಿ ಕಾಡಾನೆ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು. ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಪಟ್ಟ ಇಲಾಖೆ, ಸಚಿವರು ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳನ್ನು ಭೇಟಿ ಮಾಡಿ ಕ್ಷೇತ್ರದ ಸಮಸ್ಯೆ ಬಗ್ಗೆ ಈಗಾಗಲೆ ಮನವರಿಕೆ ಮಾಡಲಾಗಿದೆ. ಪ್ರಸ್ತುತ ಬೆಳವಣಿಗೆ ಸರ್ಕಾರಕ್ಕೆ ಬಿಸಿ ತಟ್ಟಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಬಹುದು ಎಂದು ಭಾವಿಸಿದ್ದೇನೆ ಎಂದರು.
ಬಿಜೆಪಿ ಮುಖಂಡ ಕಣಗಾಲ್ ಲೋಕೇಶ್ ಮಾತನಾಡಿ, ಶಾಸಕ ಸಿಮೆಂಟ್ ಮಂಜು ಅವರು ತಮ್ಮ ಪಕ್ಷದ ಸರ್ಕಾರ ಇಲ್ಲದಿದ್ದರೂ, ಪ್ರತಿನಿತ್ಯ ಜನಸಾಮಾನ್ಯರ ಮಧ್ಯದಲ್ಲಿದ್ದು ಕಷ್ಟ-ಸುಖ ಅಲಿಸುತ್ತಿದ್ದಾರೆ. ಕಳೆದ ವಿಧಾನಸಭೆ ಅದಿವೇಶನದಲ್ಲಿ ಮೂರು ಬಾರಿ ಕಾಡಾನೆ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ ಎಂದರು.
ಕುಡಿಯುವ ನೀರು ಮತ್ತು ನೈರ್ಮಲ್ಯ ಸಹಾಯಕ ನಿರ್ದೇಶಕ ರವಿ, ಬಿಜೆಪಿ ಮುಖಂಡ ಕಟ್ಟೆಗದ್ದೆ ನಾಗರಾಜ್, ಅಜಿತ್, ಹನುಮಂತೇಗೌಡ, ಗಣೇಶ್, ಜೆಸಿಬಿ ರವಿ, ನಂಜುಂಡಪ್ಪ ಉಪಸ್ಥಿತರಿದ್ದರು.