ಸಕಲೇಶಪುರ: ಪುರಸಭೆಗಳ ಉಸ್ತುವಾರಿಗೆ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರ ಹುದ್ದೆ ಹಾಗೂ ಸಹಾಯಕ ಕಾರ್ಯಪಾಲ ಎಂಜಿನಿಯರ್ ಹುದ್ದೆಗಳು `ವೇಸ್ಟ್ ಬಾಡಿಗಳಿದ್ದಂತೆ~ ಎಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ಟೀಕಿಸಿದರು.
ಭಾನುವಾರ ಹೇಮಾವತಿ ನದಿಗೆ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ, ಕಳಪೆ ಕಾಮಗಾರಿಗಳು, ಸಾರ್ವಜನಿಕ ಹಣ ದುರುಪಯೋಗ ಇವುಗಳನ್ನು ತಡೆಯುವಲ್ಲಿ ನಗರಸಭೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದರು.
ತನಿಖೆಗೆ ಆಗ್ರಹ: ಪುರಸಭೆಯಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಸುಮಾರು 12 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಎಲ್ಲಾ ರಸ್ತೆಗಳು ಕಳಪೆ ಕಾಮಗಾರಿಗಳಿಂದ ಸಂಪೂರ್ಣವಾಗಿ ಗುಂಡಿ ಬಿದ್ದು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಈ ಬಗ್ಗೆ ಸಮಗ್ರ ತನಿಖೆ ಕೈಗೊಂಡು ತಪ್ಪಿತಸ್ಥ ಅಧಿಕಾರಿಗಳು ಹಾಗೂ ಕಾಮಗಾರಿ ನಿರ್ವಹಣೆ ಮಾಡಿರುವ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಲಾಗುವುದು ಎಂದರು.
ನೆಲಮಂಗಲ- ಬಿ.ಸಿ.ರೋಡ್ ನಡುವೆ ಚಥುಸ್ಪತ ರಸ್ತೆ ಕಾಮಗಾರಿ ಪ್ರಗತಿಯಲ್ಲಿ ಇರುವುದರಿಂದ ಶಿರಾಡಿ ಘಾಟ್ನಲ್ಲಿ ರಸ್ತೆ ವಿಸ್ತರಣೆಗೆ ರಕ್ಷಿತ ಅರಣ್ಯ ಕಾಯಿದೆ ಅಡ್ಡಿಯಾಗಿದೆ. ಈ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದಾರೆ ಎಂದರು.
ತಹಸಿಲ್ದಾರ್ ಚಂದ್ರಮ್ಮ, ಪುರಸಭಾ ಅಧ್ಯಕ್ಷ ಎಸ್.ಡಿ.ಆದರ್ಶ, ಉಪಾಧ್ಯಕ್ಷ ಉಮೇಶ್ ಆಚಾರ್, ಜಿ.ಪಂ. ಸದಸ್ಯರಾದ ಬೈರಮುಡಿ ಚಂದ್ರು, ಸುಲೋಚನಾ ರಾಮಕೃಷ್ಣ, ಪುರಸಭಾ ಮಾಜಿ ಅಧ್ಯಕ್ಷ ಮಲ್ನಾಡ್ ಜಾಕೀರ್, ಬೆಕ್ಕನಹಳ್ಳಿ ನಾಗರಾಜ್, ಎಪಿಎಂಸಿ ಸದಸ್ಯ ಸುಪ್ರದೀಪ್ತ ಯಜಮಾನ್ ಇದ್ದರು.