ರಾಮನಾಥಪುರ: ದೊಡ್ಡಮಗ್ಗೆ ಹೋಬಳಿಯ ಕೊರಟಿಕೆರೆ ಗ್ರಾಮ ಮೂಲ ಸೌಕರ್ಯ ಕಾಣದೆ ಬಳಲುತ್ತಿದೆ.
ಜನಸಂಖ್ಯೆಗೆ ಅನುಗುಣವಾಗಿ ಮೂಲ ಸೌಕರ್ಯ ಕಲ್ಪಿಸಿದ್ದರೆ ಈ ಗ್ರಾಮ ಎಂದೋ ಅಭಿವೃದ್ಧಿ ಕಾಣು ತ್ತಿತ್ತು. ಸುಮಾರು 500 ಮನೆ ಗಳಿರುವ ಗ್ರಾಮದ ಒಳಹೊಕ್ಕು ನೋಡಿದರೆ ಅವ್ಯವಸ್ಥೆ ಕಣ್ಣಿಗೆ ರಾಚುತ್ತದೆ.
ಗ್ರಾಮದಲ್ಲಿ ದಲಿತರು, ಮಾದಿ ಗರು, ಒಕ್ಕಲಿಗರು, ಕುಂಚಟಿಗರು, ಅರಸರು, ಕುಂಬಾರರು, ಗಾಣಿಗರು, ಮಡಿವಾಳರು, ಲಿಂಗಾ ಯಿತರು, ಬ್ರಾಹ್ಮಣರು ಹಾಗೂ ರೆಡ್ಡಿ ಜನಾಂಗ ಸೇರಿ ಸುಮಾರು 3 ಸಾವಿರ ಜನರಿದ್ದಾರೆ. ಊರಿನ ಯಾವುದೇ ಓಣಿ ಡಾಂಬರು ಕಂಡಿಲ್ಲ. ಚರಂಡಿ ವ್ಯವಸ್ಥೆ ಇಲ್ಲದೆ ಕೊಳಕು ನೀರು ರಸ್ತೆ ಮೇಲೆ ಹರಿಯುತ್ತದೆ.
ದಲಿತರ ಕಾಲೊನಿಯ ನಡು ಬೀದಿಯಲ್ಲಿಯೇ ತೋಡಿರುವ ಗುಂಡಿಯಲ್ಲಿ ಕೊಳಚೆ ನೀರು ಹೋಗುತ್ತಿದ್ದು, ಪ್ರತಿನಿತ್ಯ ಸಾರ್ವಜನಿಕರು ಕೊಳಚೆ ನೀರು ತುಳಿದು ತಿರುಗಾಡಬೇಕಿದೆ. ಚರಂಡಿ ವ್ಯವಸ್ಥೆ ಸರಿಯಿಲ್ಲದೇ ಅಕ್ಕಪಕ್ಕದಲ್ಲಿ ವಾಸಿಸುವ ನಿವಾಸಿಗಳು ತೊಂದರೆ ಗೀಡಾಗಿ ರೋಗ- ರುಜಿನಗಳಿಗೆ ತುತ್ತಾಗಬೇಕಿದೆ ಎಂದು ಗ್ರಾಮಸ್ಥರು ದೂರುತ್ತಾರೆ.
ಇದೇ ಗ್ರಾಮದ ಆಟೋ ರಾಜಯ್ಯ ಈ ಹಿಂದೆ ಜಿಲ್ಲಾ ಪಂಚಾ ಯಿತಿ ಸದಸ್ಯರಾಗಿದ್ದ ಅವಧಿಯಲ್ಲಿ ದಲಿತರ ಬೀದಿಯಲ್ಲಿ ನಿರ್ಮಿಸಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನ ಕಾಮಗಾರಿ ಅಪೂರ್ಣಗೊಂಡು ಈಗ ನಿರ್ವಹಣೆಯಿಲ್ಲದೆ ಅದೂ ಪಾಳು ಬಿದ್ದಿದೆ. ಸುತ್ತಲೂ ಕಾಂಪೌಂಡ್ ಹಾಕಿದ್ದು, ಪುಟ್ಟದಾದ ಈ ಕಟ್ಟಡ ಮುಳ್ಳಿನ ಗಿಡ ಗಂಟಿಗಳಿಂದ ಮುಚ್ಚಿ ಹೋಗುತ್ತಿದೆ. ಭವನದ ಮುಂಭಾಗ ನಿರ್ಮಿಸಿರುವ ನೀರಿನ ಸಂಪು ಹಾಳು ಬಿದ್ದಿದೆ.
ಗ್ರಾಮದಲ್ಲಿ ಸಮುದಾಯ ಭವನ ಇಲ್ಲದ ಕಾರಣ ರಸ್ತೆ ಮೇಲೆ ಶಾಮಿಯಾನ ಹಾಕಿ ಮದುವೆ- ಮುಂಜಿ ಕಾರ್ಯ ನಡೆಸುತ್ತಿದ್ದೇವೆ. ಚುನಾವಣೆ ಸಮಯ ಬಿಟ್ಟರೆ ಕ್ಷೇತ್ರದ ಜನಪ್ರತಿನಿಧಿಗಳು ತಮ್ಮೂರಿಗೆ ಭೇಟಿ ನೀಡುವುದೇ ಅಪರೂಪ ಎನ್ನುತ್ತಾರೆ ದಲಿತ ಕಾಲೋನಿ ನಿವಾಸಿ ರಂಗಸ್ವಾಮಿ.
ಕಳೆದ ಏಪ್ರಿಲ್ ತಿಂಗಳಿನಲ್ಲಿ ಕ್ಷೇತ್ರದ ಶಾಸಕರು ರೂ. 7.70 ಲಕ್ಷ ವೆಚ್ಚದಲ್ಲಿ ಗ್ರಾಮದ 8 ಎಕರೆ ವಿಸ್ತೀರ್ಣದ ಕೆರೆ ಅಭಿವೃದ್ಧಿಗೆ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ ಕೆರೆ ಅಭಿವೃದ್ದಿ ಕಾಮಗಾರಿ ಸಮರ್ಪಕವಾಗಿ ನಡೆಯದ ಕಾರಣ ಮತ್ತೆ ಹೂಳು ತುಂಬಿಕೊಂಡು ಹಾಳಾಗುತ್ತಿದೆ. ಸಾಕಷ್ಟು ಕಿರಿದಾದ ಕೆರೆ ಏರಿ ಸರಿಯಾಗಿ ವಿಸ್ತರಣೆ ಯಾಗದೇ ಓಡಾಟಕ್ಕೆ ತೊಂದರೆ ಯಾಗಿದೆ ಎನ್ನುತ್ತಾರೆ ಸಾರ್ವಜನಿಕರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.