ಬ್ಯಾಡಗಿ : ತಾಲ್ಲೂಕಿನಾದ್ಯಂತ ಸಂಕ್ರಾಂತಿಯನ್ನು ಜನತೆ ಶ್ರದ್ಧೆ ಭಕ್ತಿಯಿಂದ ಆಚರಿಸಿದರೆ, ಕಾಗಿನೆಲೆಯ ಕನಕ ಪರಿಸರ ಸ್ನೇಹಿ ಉದ್ಯಾನದಲ್ಲಿ ಜನತೆಯ ಕುಟುಂಬ ಸಮೇತರಾಗಿ ಸಂಭ್ರಮಿಸಿದರು. ಪರಿಸರ ಸ್ನೇಹಿ ಉದ್ಯಾನ ಹಾಗೂ ಕನಕರು ನಿರ್ಮಿಸಿದ ಕೆರೆಯಲ್ಲಿ ಸಂಕ್ರಾಂತಿ ಸಂಭ್ರಮಿಸಿದರು.
ಸ್ವಂತ ಹಾಗೂ ಬಾಡಿಗೆ ವಾಹನಗಳಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಸಕುಟುಂಬ ಸಹಿತ ತೆರಳಿದವರು ಸ್ನೇಹಿತರೊಡಗೂಡಿ ಭೋಜನ ಸವಿದರು. ಚಿಕ್ಕಮಕ್ಕಳು ಜಾರುಬಂಡಿ ಆಡಿ ಸಂಭ್ರಮಿಸಿದರು. ಸಂಜೆ ಉದ್ಯಾನದಲ್ಲಿ ಸಂಗೀತ ಕಾರಂಜಿ ವೀಕ್ಷಿಸಿದರು.
ವಿಶೇಷ ಸಂದರ್ಭದಲ್ಲಿ ಬ್ಯಾಡಗಿ, ಹಾವೇರಿಯಿಂದ ಕಾಗಿನೆಲೆ ಉದ್ಯಾನವನಕ್ಕೆ ಅಗತ್ಯ ಬಸ್ ಸೌಕರ್ಯ ಕಲ್ಪಿಸಬೇಕು ಎಂದು ಪ್ರವಾಸಿಗರು ಒತ್ತಾಯಿಸಿದರು.
ಪಟ್ಟಣದಲ್ಲಿ ಹಲವರು ಮನೆಯಲ್ಲಿಯೇ ವಿಶೇಷ ಭೋಜನ ಸವಿದು ಸಂಜೆ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಸಂಕ್ರಾಂತಿ ಶುಭಾಶಯ ವಿನಿಮಯ ಮಾಡಿಕೊಂಡು ಎಳ್ಳು–ಬೆಲ್ಲ ಸೇವಿಸಿ ಆನಂದಿಸಿದರು.