ಅಕ್ಕಿಆಲೂರು: ಮಹಾಭಾರತ ಕಾಲದ ಇತಿಹಾಸ ಹೊಂದಿರುವ ಜಿಗಳಿಕೊಪ್ಪದ ಮಾರುತಿ ನೂತನ ದೇವಸ್ಥಾನ ಉದ್ಘಾಟನೆ, ಕಳಸಾರೋಹಣ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಫೆ. 12 ರಿಂದ ನಡೆಯಲಿವೆ ಎಂದು ಇಲ್ಲಿನ ವಿರಕ್ತಮಠದ ಶಿವಬಸವ ಸ್ವಾಮೀಜಿ ಹೇಳಿದರು.
ಇಲ್ಲಿನ ಮುತ್ತಿನಕಂತಿಮಠದಲ್ಲಿ ಜಿಗಳಿಕೊಪ್ಪದ ನೂತನ ಮಾರುತಿ ದೇವಸ್ಥಾನದ ಉದ್ಘಾಟನೆ, ಕಳಸಾರೋಹಣ ಸೇರಿದಂತೆ ಇತರ ಧಾರ್ಮಿಕ ಸಮಾರಂಭಗಳ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ಫೆ. 12 ರಿಂದ ಪ್ರತಿದಿನ ಸಂಜೆ ಗಡಿಗೌಡಗಾಂವ್ನ ಶಾಂತವೀರ ಸ್ವಾಮೀಜಿ ಪ್ರವಚನ ನೀಡಲಿದ್ದು, ಫೆ. 21 ರಂದು ಬೆಳಿಗ್ಗೆ ಧ್ವಜಾರೋಹಣ, ಸಂಜೆ ಪ್ರಮುಖ ಬೀದಿಗಳಲ್ಲಿ ನೂತನ ಮೂರ್ತಿಯ ಮೆರವಣಿಗೆ, ಪ್ರವಚನ ಮಂಗಲ, ಫೆ. 22 ರಂದು ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ, ನೂತನ ದೇವಸ್ಥಾನದ ಲೋಕಾರ್ಪಣೆ ನಡೆಯಲಿದೆ ಎಂದರು.
ಮುತ್ತಿನಕಂತಿಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಅಕ್ಕಿಆಲೂರು ಮತ್ತೊಮ್ಮೆ ಐತಿಹಾಸಿಕ ಧಾರ್ಮಿಕ ಸಮಾರಂಭಕ್ಕೆ ಸಾಕ್ಷಿಯಾಗುತ್ತಿದೆ. ಸಮಾರಂಭದ ಯಶಸ್ಸಿಗೆ ಭಕ್ತ ಸಮೂಹ ಕೈ ಜೋಡಿಸಬೇಕು ಎಂದು ಹೇಳಿದರು.