ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲವಂತವಾಗಿ ಬೆಳೆಸಾಲ ವಸೂಲಿ ಮಾಡಬೇಡಿ: ಸಿಇಒ ಅಕ್ಷಯ್ ಶ್ರೀಧರ್ ಸೂಚನೆ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಬ್ಯಾಂಕರ್‌ಗಳಿಗೆ ಸಿಇಒ ಅಕ್ಷಯ್ ಶ್ರೀಧರ್ ಸೂಚನೆ
Published 3 ನವೆಂಬರ್ 2023, 15:44 IST
Last Updated 3 ನವೆಂಬರ್ 2023, 15:44 IST
ಅಕ್ಷರ ಗಾತ್ರ

ಹಾವೇರಿ: ‘ಜಿಲ್ಲೆಯಲ್ಲಿ ತೀವ್ರ ಬರಗಾಲವಿದ್ದು, ಸರ್ಕಾರ 8 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ರೈತರ ಪರಿಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಬ್ಯಾಂಕ್‍ಗಳು ಬಲವಂತವಾಗಿ ರೈತರ ಸಾಲ ವಸೂಲಿಯಾಗಲಿ, ಹರಾಜು ಪ್ರಕ್ರಿಯೆ ಕೈಗೊಳ್ಳಬಾರದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ್ ಬ್ಯಾಂಕರ್‌ಗಳಿಗೆ ತಾಕೀತು ಮಾಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲೆಯ ಬ್ಯಾಂಕ್‌ಗಳ ತ್ರೈಮಾಸಿಕ ಸಭೆ ಹಾಗೂ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಪರಿಶೀಲನೆ ನಡೆಸಿದ ಅವರು, ‘ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಅವರ ಸಾಲ ವಸೂಲಿಗೆ ಒತ್ತಡ ಹಾಕಬೇಡಿ. ಎಲ್ಲವನ್ನೂ ಕಾನೂನಿನ ಆಯಾಮದಲ್ಲಿ ನೋಡಬೇಡಿ, ರೈತರೊಂದಿಗೆ ಸೂಕ್ಷ್ಮವಾಗಿ ನಡೆದುಕೊಳ್ಳಿ. ಮಾನವೀಯ ನೆಲೆಯಲ್ಲಿ ವ್ಯವಹರಿಸಿ’ ಎಂದು ಸಲಹೆ ನೀಡಿದರು.

‘ರೈತರಿಗೆ ಕೃಷಿ ಸಾಲ, ಕೃಷಿ ಪೂರಕ ಸಾಲ ನೀಡಿಕೆ ಮತ್ತು ಸಾಲ ವಸೂಲಾತಿಯಲ್ಲಿ ಆರ್.ಬಿ.ಐ. ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಿ’ ಎಂದರು.

ಕೆಸಿಸಿ ಕಾರ್ಡ್ ನೀಡಲು ಸೂಚನೆ: ‘ಗ್ರಾಮೀಣ ಮಟ್ಟದಲ್ಲಿ ಅಭಿಯಾನದ ಮೋಡ್‍ನಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಬಾಕಿ ಉಳಿದಿರುವ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ನ.30ರೊಳಗಾಗಿ ವಿತರಿಸಬೇಕು. ಖಾತೆಗೆ ಆಧಾರ್ ಜೋಡಣೆ, ಇ-ಕೆವೈಸಿಗೂ ಕ್ರಮವಹಿಸಬೇಕು. ಅರ್ಹರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಬೇಕು’ ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಬ್ಯಾಂಕ್ ಆಫ್ ಬರೋಡಾ ಶಿವಮೊಗ್ಗ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ವ್ಯವಸ್ಥಾಪಕ ರವಿ ಎಚ್.ಜಿ ಮಾತನಾಡಿ, ‘ಜಿಲ್ಲೆಯಲ್ಲಿ ಸೆಪ್ಟೆಂಬರ್ ಅಂತ್ಯದ ವರೆಗೆ ಅಲ್ಪಸಂಖ್ಯಾತರಿಗೆ ₹707.63 ಕೋಟಿ, ದುರ್ಬಲ ವರ್ಗದವರಿಗೆ ₹5684.45 ಕೋಟಿ ಹಾಗೂ ಮಹಿಳೆಯರಿಗೆ ₹2402.60 ಕೋಟಿ ಸಾಲ ವಿತರಣೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ನಬಾರ್ಡ್‌ ಬ್ಯಾಂಕ್‌ನಿಂದ (ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್) 2024-25ನೇ ಸಾಲಿನ ಸಂಭಾವ್ಯ ಸಾಲ ಯೋಜನೆಯನ್ನು ಜಿಲ್ಲಾ ಪಂಚಾಯಿತಿ ಸಿಇಒ ಅಕ್ಷಯ ಶ್ರೀಧರ್ ಬಿಡುಗಡೆ ಮಾಡಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಅಣ್ಣಯ್ಯ ವಿಷಯಗಳನ್ನು ಮಂಡಿಸಿದರು.

ಬೆಂಗಳೂರು ಆರ್.ಬಿ.ಐ. ಲೀಡ್ ಬ್ಯಾಂಕ್ ವ್ಯವಸ್ಥಾಪಕ ಇಳಾಸಾಹು, ಕೆ.ವಿ.ಜಿ. ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಟಿ.ವಿ.ಭಾಗವತ್, ನಬಾರ್ಡ್ ಬ್ಯಾಂಕ್ ಅಧಿಕಾರಿ ರಂಗನಾಥ್, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಕೊರವರ ಅವರು ವಿವಿಧ ವಿಷಯಗಳ ಕುರಿತು ಬ್ಯಾಂಕರ್ಸ್ ಹಾಗೂ ಅಧಿಕಾರಿಗಳೊಂದಿಗೆ ಮಾಹಿತಿ ಹಂಚಿಕೊಂಡರು.

ಸಾಲದ ಹಣಕ್ಕೆ ಜಮೆ ಬೇಡ’

‘ಬೆಳೆ ಪರಿಹಾರ ಬೆಳೆ ವಿಮಾ ಪರಿಹಾರ ಹಣ ರೈತರ ಖಾತೆಗೆ ಜಮೆಯಾದಾಗ ಸಾಲದ ಹಣಕ್ಕೆ ಬಲವಂತವಾಗಿ ಜಮೆ ಮಾಡಿಕೊಳ್ಳಬೇಡಿ. ಆದಾಗ್ಯೂ ಖಾತೆದಾರ ರೈತನೊಂದಿಗೆ ಚರ್ಚಿಸಿ ಆ ರೈತ ಒಪ್ಪಿದರೆ ಭಾಗಶಃ ಹಣ ಮಾತ್ರ ಸಾಲಕ್ಕೆ ಜಮೆ ಮಾಡಿಕೊಳ್ಳಬಹುದು. ಸಾಮಾಜಿಕ ಭದ್ರತಾ ಯೋಜನೆಯಡಿ ಜಮೆಯಾಗುವ ಪಿಂಚಣಿ ಹಣವನ್ನು ಫಲಾನುಭವಿಗಳ ಸಾಲದ ಬಾಕಿಗೆ ಜಮೆ ಮಾಡಿಕೊಳ್ಳಬಾರದು’ ಎಂದು ಬ್ಯಾಂಕ್‌ ಅಧಿಕಾರಿಗಳಿಗೆ ಜಿ. ಪಂ. ಸಿಇಒ ಅಕ್ಷಯ ಶ್ರೀಧರ್‌ ತಾಕೀತು ಮಾಡಿದರು. ‘ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿರುವ ದೂರುಗಳು ಬರುತ್ತಿವೆ. ಪುನಃ ಇಂತಹ ದೂರುಗಳು ಬಂದರೆ ಬ್ಯಾಂಕ್‌ಗಳ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ರೈತರಿಗೆ ಸಾಲ ನೀಡಲು ಸೂಚನೆ

‘ಬ್ಯಾಂಕ್‌ಗಳು ರೈತರಿಗೆ ಸಾಲ ನೀಡುತ್ತಿಲ್ಲ ಎಂಬ ದೂರುಗಳಿವೆ. ಜಿಲ್ಲೆಯ ಅರ್ಹ ರೈತರಿಗೆ ಕಿಸಾನ್ ಕ್ರೆಡಿಟ್ ಸಾಲ ಕಡ್ಡಾಯವಾಗಿ ನೀಡಬೇಕು. ಬರಗಾಲ ಇದ್ದರೂ ನೀರಾವರಿ ಸೌಕರ್ಯ ಇರುವವರಿಗೆ ಬೆಳೆಸಾಲ ನೀಡಲು ತೊಂದರೆ ಏನು? ಹೈನುಗಾರಿಕೆ ತೋಟಗಾರಿಕೆ ರೇಷ್ಮೆ ಪಶು ಸಂಗೋಪನೆ ಮೀನುಗಾರಿಕೆ ಒಳಗೊಂಡಂತೆ ಕೃಷಿ ಪೂರಕ ಚಟುವಟಿಕೆಗೆ ಸಾಲ ನೀಡುವಂತೆ ಬ್ಯಾಂಕರ್ಸ್‍ಗಳಿಗೆ ಅಕ್ಷಯ ಶ್ರೀಧರ್‌ ಸೂಚನೆ ನೀಡಿದರು.

ಬ್ಯಾಂಕ್ ಶಾಖೆ ಆರಂಭಿಸಿ

ರಾಷ್ಟ್ರೀಕೃತ ಬ್ಯಾಂಕ್‍ಗಳು ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕ್ ಶಾಖೆಗಳನ್ನು ಆರಂಭಿಸಬೇಕು. ಭಾರತೀಯ ಸ್ಟೇಟ್ ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾ ಯೂನಿಯನ್ ಬ್ಯಾಂಕ್ ಕೆನರಾ ಬ್ಯಾಂಕ್‍ಗಳಿಗೆ ಕನಿಷ್ಠ ಹೋಬಳಿ ತಾಲ್ಲೂಕು ಕೇಂದ್ರಗಳಲ್ಲಿ ಶಾಖೆಗಳ ಆರಂಭಿಸಲು ಗುರಿ ನಿಗದಿಪಡಿಸಲಾಗಿತ್ತು. ಪ್ರಮುಖ ಬ್ಯಾಂಕ್‌ಗಳು ಈವರೆಗೆ ಶಾಖೆ ತೆರೆದಿಲ್ಲ. ಪ್ರಮುಖ ಬ್ಯಾಂಕ್‍ಗಳಿಗೆ ಗುರಿ ನಿಗದಿಪಡಿಸಿದರೂ ಶಾಖೆ ಆರಂಭಿಸದೇ ಇರುವ ಬಗ್ಗೆ ಇವರಿಗೆ ಪತ್ರ ಬರೆದು ವಿವರ ಕೇಳಲು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸಿಇಒ ಅಕ್ಷಯ ಶ್ರೀಧರ್‌ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT