ಹಿರೇಕೆರೂರು (ಹಾವೇರಿ): ‘ಬೇರೆ ಪಕ್ಷದ ಶಾಸಕರು ಬಿಜೆಪಿಗೆ ಬರುವ ಅವಶ್ಯವಿಲ್ಲ. ಈಗಾಗಲೇ 119 ಶಾಸಕರು ಇದ್ದೇವೆ. ಈಗ ನಡೆಯಲಿರುವ ಮೂರು ಕ್ಷೇತ್ರಗಳ ಚುನಾವಣೆಯಲ್ಲೂ ನಾವು ಗೆಲ್ಲುತ್ತೇವೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಮಾಧ್ಯಮದವರೊಂದಿಗೆ ಸೋಮವಾರ ಮಾತನಾಡಿ, ‘ಮೀಸಲಾತಿ ಕೇಳುವುದು ಎಲ್ಲರ ಹಕ್ಕು. ಆದರೆ, ಅದನ್ನು ಪರಿಶೀಲಿಸಿ ನಿಯಮದ ಪ್ರಕಾರ ಯಾರಿಗೆ ಕೊಡಬೇಕು ಎಂಬ ತೀರ್ಮಾನ ಸರ್ಕಾರ ತೆಗೆದುಕೊಳ್ಳುತ್ತದೆ’ ಎಂದರು.
‘ಮೆಕ್ಕೆಜೋಳದ ಖರೀದಿ ಕೇಂದ್ರದ ಯಾವುದೇ ಪ್ರಸ್ತಾವ ಇಲ್ಲ. ಪಡಿತರ ವ್ಯವಸ್ಥೆಯಲ್ಲಿ ಬರದೇ ಇರುವುದರಿಂದ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ. ಹಾಗಾಗಿ ಸದ್ಯಕ್ಕೆ ಆ ಚಿಂತನೆ ಇಲ್ಲ’ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಬಿಪಿಎಲ್ ಕಾರ್ಡ್ ರದ್ದತಿ ಬಗ್ಗೆ ಮಾತನಾಡಿ, ‘ಸಚಿವ ಉಮೇಶ್ ಕತ್ತಿ ಹೇಳಿಕೆ ನೋಡಿದೆ, ಕೆಲವು ಕಡೆ ಹೆಚ್ಚುವರಿ ಬಿಪಿಎಲ್ ಕಾರ್ಡ್ಗಳಿರುವುದು ಗಮನಕ್ಕೆ ಬಂದಿದೆ. ಅಂಥ ಅನಧಿಕೃತ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲು ಕ್ರಮ ಕೈಗೊಳ್ಳಬಹುದು’ ಎಂದರು.