ಹಾವೇರಿ: ಕನ್ನಡ ಬಾವುಟ ಸುಟ್ಟು, ಸ್ವಾತಂತ್ರ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ವಿರೂಪಗೊಳಿಸಿರುವ ಎಂಇಎಸ್ ಸಂಘಟನೆಯನ್ನು ನಿಷೇಧಿಸುವಂತೆ ಆಗ್ರಹಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕಸಾಪ ಪದಾಧಿಕಾರಿಗಳು, ಆಜೀವ ಸದಸ್ಯರು, ಸಾಹಿತಿ-ಕಲಾವಿದರು ಗುರುವಾರ ಇಲ್ಲಿನ ಮೈಲಾರ ಮಹದೇವಪ್ಪನವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ‘ಎಲ್ಲ ದುಷ್ಕರ್ಮಿಗಳನ್ನು ಕೂಡಲೇ ರಾಜ್ಯ ಸರ್ಕಾರ ಬಂಧಿಸಬೇಕು. ಬೆಳಗಾವಿ ಕರ್ನಾಟಕ ರಾಜ್ಯದ ಸ್ವತ್ತಾಗಿದ್ದು, ಬೆಳಗಾವಿಯಲ್ಲಿ ಕನ್ನಡಿಗರು ಹಾಗೂ ಮರಾಠಿಗರು ಪ್ರೀತಿಯಿಂದ ಅನ್ಯೂನ್ಯವಾಗಿ ಭಾವೈಕ್ಯದಿಂದ ಜೀವನವನ್ನು ನಡೆಸುತ್ತಿದ್ದಾರೆ. ಎಂ.ಇ.ಎಸ್ ಸಂಘಟನೆಯವರು ರಾಜ್ಯದ ಜನರ ಆಸ್ತಿ-ಪಾಸ್ತಿಯನ್ನು ಹಾಳು ಮಾಡುತ್ತಾ ಕನ್ನಡಗರ ಸ್ವಾಭಿಮಾನವನ್ನು ಕೆಣಕುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಡಿನಲ್ಲಿ ಗುಂಡಾ ವರ್ತನೆ ತೋರುತ್ತಿರುವ ಎಂ.ಇ.ಎಸ್ ಸಂಘಟನೆಯ ಪದಾಧಿಕಾರಿಗಳನ್ನು ಬಂಧಿಸಬೇಕು. ಕನ್ನಡ ನಾಡು-ನುಡಿಯ ಬಗ್ಗೆ ಸದಾ ಒಂದಿಲ್ಲ ಎಂದು ಕ್ಯಾತೆ ತೆಗೆಯುತ್ತಾ ಬಂದಿರುವ ಎಂ.ಇ.ಎಸ್. ಪುಂಡಾಟಿಕೆಯನ್ನು ಸರ್ಕಾರ ಸಹಿಸಬಾರದು. ಸರ್ಕಾರ ಎಂಇಎಸ್ ಸಂಘಟನೆಯನ್ನು ನಿಷೇಧಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿದರು.
ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ವಿರೂಪಗೊಳಿಸಿರುವುದು, ಕನ್ನಡ ಭಾವುಟವನ್ನು ಸುಟ್ಟುಹಾಕಿರುವ ಅತೀರೇಕದ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ಎಂ.ಇ.ಎಸ್ನವರು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವುದಲ್ಲದೇ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದ್ದಾರೆ. ನಾಡು-ನುಡಿಗೆ ಧಕ್ಕೆ ತರುವ ವಿಷಯವನ್ನುರಾಜ್ಯ ಸರ್ಕಾರ ಗಂಭಿರವಾಗಿ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವೈ.ಬಿ.ಆಲದಕಟ್ಟಿ, ರುದ್ರಪ್ಪ ಜಾಬಿನ, ಬಿ.ಎಂ.ಜಗಾಪುರ, ಕೆ.ಆರ್.ಕೋಣ್ತಿ, ರೇಣುಕಾ ಗುಡಿಮನಿ ಮತ್ತಿತರರು ಮಾತನಾಡಿದರು.ಪ್ರತಿಭಟನೆಯಲ್ಲಿ ಎಸ್.ಎಸ್.ಬೇವಿನಮರದ, ಪ್ರಭು ಹಿಟ್ನಳ್ಳಿ, ವಿವೇಕಾನಂದ ಬೆಂಡಿಗೇರಿ, ವಿ.ಪಿ.ದ್ಯಾವಣ್ಣವರ, ನಜೀರ ಸವಣೂರ, ಎ.ಜಿ.ರಾಘವೇಂದ್ರ, ಎಸ್.ಎನ್.ಮುಗಳಿ, ಶಂಕ್ರಗೌಡ್ರು, ಪ್ರಬಾಕರ ಶಿಗ್ಲಿ, ಶಶಿಕಲಾ ಅಕ್ಕಿ, ಜಿ.ಜಿ.ಆರಾಧ್ಯಮಠ, ವಿರೇಶ ಶಂಕಿನಮಠ, ಜಗದೀಶ ಕನವಳ್ಳಿ, ಆರ್.ಬಿ.ದೊಡ್ಡಗೌಡ್ರ, ಸತೀಶ ಮಡಿವಾಳರ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.