ಕಿವಿಯೋಲೆ: ರಾಜ್ಯದಲ್ಲೇ ಜಿಲ್ಲೆಗೆ 3ನೇ ಸ್ಥಾನ

ಹಾವೇರಿ: ‘ಜಾನುವಾರುಗಳಿಗೆ ಕಿವಿಯೋಲೆ ಅಳವಡಿಸುವ ಜತೆಗೆ ಕಾಲುಬಾಯಿ ರೋಗ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲೆಯು ರಾಜ್ಯದಲ್ಲೆ 3ನೇ ಸ್ಥಾನದಲ್ಲಿದೆ’ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ರಾಜೀವ್ ಎನ್. ಕೂಲೇರ ಹೇಳಿದರು.
ನಗರದ ಪಶುವೈದ್ಯಕೀಯ ಪಾಲಿಕ್ಲಿನಿಕ್ ಆವರಣದಲ್ಲಿ ಗುರುವಾರ ಜಾನುವಾರು ಅಭಿವೃದ್ಧಿ ಅಧಿಕಾರಿಗಳು, ಜಾನುವಾರು ಅಧಿಕಾರಿಗಳು, ಹಿರಿಯ ಪಶುವೈದ್ಯಕೀಯ ಪರೀಕ್ಷಕರು, ಪಶು ವೈದ್ಯಕೀಯ ಪರೀಕ್ಷಕರು ಹಾಗೂ ಪಶುವೈದ್ಯಕೀಯ ಸಹಾಯಕರಿಗೆ ನಡೆದ ಒಂದು ದಿನದ ತಾಂತ್ರಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 3.46 ಲಕ್ಷ ಜಾನುವಾರುಗಳಿಗೆ ‘ಇನಾಫ್’ ತಂತ್ರಾಂಶದ ಅಡಿಯಲ್ಲಿ ಕಿವಿಯೋಲೆ ಅಳವಡಿಸುವ ಕಾರ್ಯಕ್ರಮ ಜಾರಿಯಲ್ಲಿದೆ. ಜಿಲ್ಲೆಯಲ್ಲಿ ಈಗಾಗಲೇ 3.11 ಲಕ್ಷ ಜಾನುವಾರುಗಳಿಗೆ ಕಿವಿಯೋಲೆ ಅಳವಡಿಸಿ, ಕಾಲುಬಾಯಿ ರೋಗದ ಲಸಿಕೆ ಹಾಕಲಾಗಿದೆ. ಇಲಾಖೆಯ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.
ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ಗೋಪಿನಾಥ ಮಾತನಾಡಿ, ಸರ್ಕಾರಿ ನೌಕರರು ತಾವು ಸಲ್ಲಿಸುವ ಹುದ್ದೆಯಲ್ಲಿ ಬದ್ಧತೆಯಿಂದ ಕೆಲಸ ಮಾಡಬೇಕು’ ಎಂದರು.
ರೇಬೀಸ್ ರೋಗ ಮತ್ತು ನಿಯಂತ್ರಣ ಕುರಿತು ಮುಖ್ಯ ಪಶುವೈದ್ಯಾಧಿಕಾರಿ ಡಾ.ಎಚ್.ಬಿ.ಸಣ್ಣಕ್ಕಿ ಉಪನ್ಯಾಸ ನೀಡಿ, ಮಾರಣಾಂತಿಕ ಕಾಯಿಲೆಗಳ ಪೈಕಿ ರೇಬೀಸ್ ಮೊದಲ ಸ್ಥಾನದಲ್ಲಿದೆ. ಈ ರೋಗ ಶೇ 97ರಷ್ಟು ನಾಯಿಗಳಿಂದ ಹರಡುತ್ತದೆ. ರೇಬೀಸ್ ರೋಗ ಪೀಡಿತ ನಾಯಿ, ನರಿ, ಬೆಕ್ಕು ಕಚ್ಚುವುದರಿಂದ ರೋಗ ಹರಡುತ್ತದೆ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದರೆ ಗುಣಮುಖರಾಗಲು ಸಾಧ್ಯವಿದೆ ಎಂದರು.
ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಮಹೇಶ ಕಡಗಿ ಅವರು ಜಾನುವಾರುಗಳಲ್ಲಿ ಚರ್ಮಗಂಟು ರೋಗದ ಕುರಿತು ಉಪನ್ಯಾಸ ನೀಡಿದರು. ಸಹಾಯಕ ನಿರ್ದೇಶಕ ಡಾ.ಪರಮೇಶ ಎನ್.ಹುಬ್ಬಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪಶುವೈದ್ಯಕೀಯ ಪರೀಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಎಸ್.ಅಗಸರ, ಉಪಾಧ್ಯಕ್ಷ ಡಿ.ಬಿ.ವಳಗೇರಿ, ಎಸ್.ಎಫ್.ಕರಿಯಪ್ಪನವರ ಇದ್ದರು. ಹಿರಿಯ ಪಶುವೈದ್ಯಕೀಯ ಪರೀಕ್ಷಕ ಸಿ.ಡಿ.ಯತ್ನಳ್ಳಿ ಸ್ವಾಗತಿಸಿದರು. ಹಿರಿಯ ಪಶುವೈದ್ಯಕೀಯ ಪರೀಕ್ಷಕ ಎಚ್.ಆರ್.ನಾಯಕ ನಿರೂಪಿಸಿದರು. ಹಿರಿಯ ಪಶುವೈದ್ಯಕೀಯ ಪರೀಕ್ಷಕ ಬಿ.ಐ.ಆಡೂರ ವಂದಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.