ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಣೂರು | ದೇಸಿ ಕ್ರೀಡೆಗೆ ಸರ್ಕಾರದಿಂದ ಪ್ರೋತ್ಸಾಹ: ಸಂಸದ ಶಿವಕುಮಾರ

ರಾಷ್ಟ್ರಮಟ್ಟದ ಕಬಡ್ಡಿ ಉತ್ಸವಕ್ಕೆ ಚಾಲನೆ: ಸಂಸದ ಶಿವಕುಮಾರ ಉದಾಸಿ ಹೇಳಿಕೆ
Last Updated 25 ಮಾರ್ಚ್ 2023, 5:06 IST
ಅಕ್ಷರ ಗಾತ್ರ

ಸವಣೂರು: ‘ಪ್ರಧಾನಿ ನರೇಂದ್ರ ಮೋದಿ ಅವರು ಖೇಲೋ ಇಂಡಿಯಾ ಮೂಲಕ ದೇಸಿ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ ಯುವಕ-ಯುವತಿಯರಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ’ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾದ ರಾಷ್ಟ್ರ ಮಟ್ಟದ ಆಹ್ವಾನಿತ ಸವಣೂರು ಕಬಡ್ಡಿ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯುವ ಜನತೆ ಮಾನಸಿಕ ಹಾಗೂ ದೈಹಿಕವಾಗಿ ಸಶಕ್ತರಾಗಲು ದೇಸಿ ಕ್ರೀಡೆಗಳು ಪ್ರಮುಖ ಪಾತ್ರವನ್ನು ವಹಿಸುತ್ತಿರುವುದರಿಂದ ಖೇಲೋ ಇಂಡಿಯಾ ತರಲಾಗಿದೆ. ಈ ಯೋಜನೆ ಮೂಲಕ ಕ್ರೀಡಾಪಟುಗಳಿಗೆ ಕ್ರೀಡಾ ತರಬೇತಿ ನೀಡುವುದರೊಂದಿಗೆ ಕ್ರೀಡೆಗಳಲ್ಲಿ ಭಾಗವಹಿಸಲು ಉತ್ತೇಜಿಸುವ ಮೂಲಕ ಸದೃಢ ದೇಶ ಕಟ್ಟಲು ಶ್ರಮಿಸಲಾಗುತ್ತಿದೆ. ಭಾರತ ದೇಶದಲ್ಲಿ ಕ್ರಿಕೆಟ್‌ ದ್ವಿತೀಯ ಸ್ಥಾನದಲ್ಲಿದ್ದು, ಕಬ್ಬಡ್ಡಿ 10ನೇ ಸ್ಥಾನದಲ್ಲಿತ್ತು. ಅದನ್ನು ಹಿಮ್ಮೆಟ್ಟಿ ಪ್ರೊ– ಕಬಡ್ಡಿ ಮೂಲಕ ಕೇವಲ 2 ವರ್ಷಗಳಲ್ಲಿ 2ನೇ ಸ್ಥಾನವನ್ನು ಅಲಂಕರಿಸಿರುವುದು ಹೆಮ್ಮೇಯ ವಿಷಯ ಎಂದರು.

ಈ ಹಿಂದೆ ಪ್ರೊ ಕಬಡ್ಡಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನವಾಗಿ ₹12 ಲಕ್ಷ ದೊರೆಯುತ್ತಿತ್ತು. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ₹2.26 ಕೋಟಿ ದೊರೆಯುತ್ತಿದ್ದು ಕ್ರೀಡಾಪಟುಗಳಿಗೆ ಉತ್ತೇಜನ ನೀಡಿದಂತಾಗಿದೆ. ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ದೇಶಕ್ಕೆ ಕೀರ್ತಿ ತರಲಿ ಎಂದು ಶುಭ ಹಾರೈಸಿದರು.

ಶಿಗ್ಗಾವಿ–ಸವಣೂರು ಸ್ವ–ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಅಭಿವೃದ್ಧಿಯ ಪರ್ವವನ್ನು ಕೈಗೊಳ್ಳುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮಗೆ ಸಿಕ್ಕ ಅವಕಾಶವನ್ನು ಬದ್ಧತೆಯ ಮೂಲಕ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭೆ ಅಧ್ಯಕ್ಷೆ ಶೈಲಾ ಮುದಿಗೌಡ್ರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಯುವ ಸಬಲಿಕರಣ ಕ್ರೀಡಾ ಇಲಾಖೆ ಜಂಟಿ ನಿರ್ದೇಶಕ ಎಂ.ಎಸ್.ರಮೇಶ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಲತಾ ಬಿ.ಎಚ್, ಗ್ರೇಡ್-2 ತಹಶೀಲ್ದಾರ್‌ ಗಣೇಶ ಸವಣೂರು, ಬಿಜೆಪಿ ಮಂಡಲ ಅಧ್ಯಕ್ಷ ಗಂಗಾಧರ ಬಾಣದ, ಸಾರಿಗೆ ನಿಗಮ ಮಂಡಳಿ ಉಪಾಧ್ಯಕ್ಷ ಮೋಹನ ಮೆಣಸಿನಕಾಯಿ, ಶಿವಾನಂದ ಮ್ಯಾಗೇರಿ, ಬಸವರಾಜ ಸವೂರ, ಮಂಜುನಾಥ ಗಾಣಗೇರ, ಶೋಬಾ ನಿಸ್ಸಿಮಗೌಡ್ರ, ಪಾಂಡುರಂಗ ಮಹೇಂದ್ರಕರ, ಸುಭಾಸ ಗಡೆಪ್ಪನವರ, ಎಸ್.ವಾಯ್.ಪಾಟೀಲ, ಮಂಜುನಾಥ ಉಡುಪಿ, ಕ್ರೀಡಾ ಆಯೋಜಕರಾದ ಫಕ್ಕೀರಗೌಡ ಪಾಟೀಲ, ಮಾಹಾಂತೇಶ ಮೆಣಸಿನಕಾಯಿ, ಪ್ರದೀಪ ಸವೂರ ಸೇರಿದಂತೆ ಕ್ರೀಡಾಭಿಮಾನಿಗಳು, ಕ್ರೀಡಾಪಟುಗಳು ಇದ್ದರು.

ಕಾರ್ಯಕ್ರಮವನ್ನು ಆನಂದ ಮತ್ತಿಗಟ್ಟಿ, ವಿದ್ಯಾಧರ ಕುತನಿ ಹಾಗೂ ಬಸವರಾಜ ಚಳ್ಳಾಳ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT