ಚುನಾವಣಾ ಕಣದಲ್ಲಿ ಮಾತ್ರ ಜಿದ್ದಾಜಿದ್ದಿ: ಮನೋಹರ ತಹಶೀಲ್ದಾರ್

ಹಾವೇರಿ: ‘ಸಿ.ಎಂ. ಉದಾಸಿ ಮತ್ತು ನಾನು ಸತತ ಎಂಟು ಬಾರಿ ಚುನಾವಣಾ ಕಣದಲ್ಲಿ ಪ್ರತಿಸ್ಪರ್ಧೆ ಮಾಡಿದ್ದೇವೆ. ಸೋಲು–ಗೆಲುವನ್ನು ಇಬ್ಬರೂ ಕಂಡಿದ್ದೇವೆ. ನಮ್ಮ ಜಿದ್ದಾಜಿದ್ದಿ ಚುನಾವಣಾ ಕಣದಲ್ಲಿ ಮಾತ್ರ ಇತ್ತು. ವೈಯಕ್ತಿಕವಾಗಿ ಇಬ್ಬರ ನಡುವೆ ಯಾವುದೇ ದ್ವೇಷ ಇರಲಿಲ್ಲ’ ಎಂದು ಮಾಜಿ ಸಚಿವ ಮನೋಹರ ತಹಶೀಲ್ದಾರ್ ಹೇಳಿದರು.
ಹಾನಗಲ್ನಲ್ಲಿ ಸಿ.ಎಂ. ಉದಾಸಿ ಅವರ ಅಂತಿಮ ದರ್ಶನ ಪಡೆದ ನಂತರ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, 1978ರ ಚುನಾವಣೆಯಲ್ಲಿ ಇಬ್ಬರೂ ಒಟ್ಟಿಗೆ ಇದ್ದೆವು. ನಂತರ ರಾಜಕೀಯ ಸ್ಥಿತ್ಯಂತರವಾದಾಗ ಬೇರೆ ಆಗಿ ಪರಸ್ಪರ ಎದುರಾಳಿಗಳಾದೆವು. ಎಂಟು ಬಾರಿ ಚುನಾವಣಾ ಕಣದಲ್ಲಿ ಸ್ಪರ್ಧೆ ಮಾಡಿದ್ದೇವೆ. ತಾಲ್ಲೂಕಿನ ಅಭಿವೃದ್ಧಿಗಾಗಿ ಹೋರಾಟ ಮಾಡಿದ್ದೇವೆ, ವೈಯಕ್ತಿಕವಾಗಿ ಚೆನ್ನಾಗಿಯೇ ಇದ್ದೆವು ಎಂದು ತಿಳಿಸಿದರು.
‘1978ರಿಂದ ನಾನು ಅವರ ಮನೆಗೆ ಹೋಗಿಯೇ ಇರಲಿಲ್ಲ. ಉದಾಸಿ ಅವರ ಆರೋಗ್ಯ ಹದಗೆಟ್ಟಿದೆ ಎಂದಾಗ ತಡೆದುಕೊಳ್ಳಲು ಆಗಲಿಲ್ಲ. ಅವರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದೆ. ಅಂದು ಗೆಳೆಯನಂತೆ ಟೀ ಕುಡಿಯೋವರೆಗೂ ಬಿಡಲಿಲ್ಲ. ಇನ್ನು ಮುಂದೆ ಒಳ್ಳೆಯ ಸಂಬಂಧ ಇಟ್ಟುಕೊಳ್ಳೋಣ ಎಂದು ಹೇಳಿದ್ದರು’ ಎಂದು ನೆನಪುಗಳನ್ನು ಹಂಚಿಕೊಂಡರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.