ಸವಣೂರ: ಉಲ್ಟಾ ಹಾರಿದ ಧ್ವಜ- ಗ್ರಾಮಸ್ಥರ ಆಕ್ರೋಶ

ಸವಣೂರ: ತಾಲ್ಲೂಕಿನ ಯಲವಿಗಿ ಗ್ರಾಮ ಪಂಚಾಯ್ತಿಯಲ್ಲಿ 74ನೇ ಗಣರಾಜ್ಯೋತ್ಸವದ ಅಂಗವಾಗಿ ಗುರುವಾರ ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ಧ್ವಜ ತಲೆಕೆಳಗಾಗಿ ಹಾರಿದೆ.
ಗ್ರಾಮ ಪಂಚಾಯ್ತಿ ಸಿಬ್ಬಂದಿ ಯಡವಟ್ಟಿನಿಂದ ರಾಷ್ಟ್ರಧ್ವಜ ಉಲ್ಟಾ ಹಾರಿದೆ, ಆದರೂ ರಾಷ್ಟ್ರಗೀತೆ ಹೇಳಲು ಮುಂದಾಗಿ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಸಿಬ್ಬಂದಿ ವಿರುದ್ಧ ಸ್ಥಳೀಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು. ನಂತರ ರಾಷ್ಟ್ರಗೀತೆ ಅರ್ಧಕ್ಕೆ ಮೊಟಕುಗೊಳಿಸಿ ಧ್ವಜ ಸರಿಪಡಿಸಲು ಮುಂದಾದರು.
ಈ ಘಟನೆಗೆ ಸಂಬಂಧಿಸಿದಂತೆ ಗಣರಾಜ್ಯೋತ್ಸವದ ಆಚರಣೆ ಕುರಿತು ಜ.20 ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ಬಿಲ್ ಕಲೆಕ್ಟರ್ಗಳಾದ ವೀರಪ್ಪ ಬಿಕ್ಕಣ್ಣವರ, ಸುರೇಶ್ ಕುರುಬರ, ಕ್ಲರ್ಕ್ ರವಿಚಂದ್ರ ಬಡ್ನಿ ಅವರನ್ನು ನಿಯೋಜಿಸಲಾಗಿತ್ತು. ತಡವಾಗಿ ಬಂದ ಇವರು ತರಾತುರಿಯಲ್ಲಿ ನಿರ್ಲಕ್ಷ್ಯ ವಹಿಸಿ ಧ್ವಜ ತಲೆ ಕೆಳಗಾಗಿ ಕಟ್ಟಿದ ಪರಿಣಾಮ ಸಂಪೂರ್ಣ ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿಗೆ ಮುಜುಗರ ಉಂಟಾಗಿದೆ.
ಇದರಿಂದ ಆಕ್ರೋಶಕೊಂಡ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಕಿಡಿ ಕಾರಿ ಪ್ರತಿಭಟನೆ ನಡೆಸಿ, ಗ್ರಾಮ ಪಂಚಾಯ್ತಿ ಅಧಿಕಾರಿ ಸೇರಿದಂತೆ ಬೇಜವಾಬ್ದಾರಿ ತೋರಿದ ಎಲ್ಲ ಸಿಬ್ಬಂದಿಯನ್ನು ಅಮಾನತು ಮಾಡಬೇಕು. ಪಂಚಾಯ್ತಿಗೆ ಹೊಸದಾಗಿ ಸಿಬ್ಬಂದಿ ನಿಯೋಜಿಸಬೇಕು ಎಂದು ಕಚೇರಿಗೆ ಮುತ್ತಿಗೆ ಹಾಕಿದರು.
ಸ್ಥಳಕ್ಕೆ ಪೋಲಿಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ನಡೆದ ಪ್ರತಿಭಟನೆ ಕೈಬಿಡುವಂತೆ ಗ್ರಾಮಸ್ಥರ ಮನವೊಲಿಸಲು ಮುಂದಾದರು. ಆದರೆ ಸ್ಥಳಕ್ಕೆ ತಾ.ಪಂ. ಇಒ ಬರಬೇಕು ಎಂದು ಅವರು ಪಟ್ಟು ಹಿಡಿದರು.
ತಾ.ಪಂ ಇಒ ನವೀನಪ್ರಸಾದ ಕಟ್ಟಿಮನಿ ಸ್ಥಳಕ್ಕೆ ಭೇಟಿ ನೀಡಿ, ‘ಘಟನೆಗೆ ಸಂಬಂಧಿಸಿದಂತೆ ಸರ್ವ ಸದಸ್ಯರ ತುರ್ತು ಸಭೆ ನಡೆಸಿ, ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಸಿಬ್ಬಂದಿಯನ್ನು ಅಮಾನತು ಮಾಡಿ, ಮುಖ್ಯ ನಿರ್ವಹಣೆ ಸಿಬ್ಬಂದಿಯ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.
ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಈ ಕುರಿತು ಸವಣೂರು ಪೋಲಿಸ್ ಠಾಣೆಯಲ್ಲಿ ಧ್ವಜಾರೋಹಣ ಸಮಿತಿ ಮುಖ್ಯ ಸಿಬ್ಬಂದಿಯ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.