ಹಾವೇರಿ: ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ವ್ಯಾಪ್ತಿಯ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿದ್ದ ಈಜುಕೊಳ ಪುನರಾರಂಭಗೊಂಡಿರುವುದು ಈಜುಪಟುಗಳಿಗೆ ಸಿಹಿ ಸುದ್ದಿಯಾಗಿದೆ.
ಕೊರೊನಾ ಸೋಂಕು ಸಂಪೂರ್ಣ ಇಳಿಕೆಯಾದ ಕಾರಣ, ಏಪ್ರಿಲ್ 1ರಿಂದ ಈಜುಕೊಳವನ್ನು ಆರಂಭಿಸಲಾಗಿತ್ತು. ಒಂದು ವಾರದಲ್ಲೇ ನೀರು ಶುದ್ಧೀಕರಣ ಟ್ಯಾಂಕ್ನಲ್ಲಿ ದೋಷ ಕಂಡು ಬಂದ ಕಾರಣ ಮತ್ತೆ ಈಜುಕೊಳ ಬಂದ್ ಆಗಿತ್ತು.
ಈಜುಕೊಳವನ್ನು ಶೀಘ್ರ ದುರಸ್ತಿ ಮಾಡಿಸಬೇಕಿದ್ದು, ಕಾಮಗಾರಿಗೆ ತಗಲುವ ₹10 ಲಕ್ಷ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದುಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಆಯುಕ್ತರಿಗೆ ಈಚೆಗೆ ಪತ್ರ ಬರೆದಿದ್ದರು.
‘ಪ್ರಜಾವಾಣಿ’ಯಲ್ಲಿ ಏಪ್ರಿಲ್ 26ರಂದು ‘ಈಜುಕೊಳ ಬಂದ್: ಕ್ರೀಡಾಪಟುಗಳಿಗೆ ನಿರಾಸೆ’ ಎಂಬ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿ, ಸಮಸ್ಯೆ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ವರದಿಗೆ ಸ್ಪಂದಿಸಿದ ಕ್ರೀಡಾ ಇಲಾಖೆ ನೀರು ಶುದ್ಧೀಕರಣ ಘಟಕವನ್ನು ದುರಸ್ತಿ ಮಾಡಿಸಿ, ಈಜುಕೊಳ ಪುನರಾರಂಭಕ್ಕೆ ಕ್ರಮ ಕೈಗೊಂಡಿದೆ.