ತಡಸ(ಶಿಗಾವಿ): ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಪತಿಯನ್ನು ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ರಾಮನಕೊಪ್ಪ ಕ್ರಾಸ್ ಬಳಿ ಗುರುವಾರ ತಡವಾಗಿ ಬೆಳಕಿಗೆ ಬಂದಿದೆ.
ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಗುಡ್ಡದಹುಲಿಕಟ್ಟಿ ಗ್ರಾಮದ ಶಿವಾನಂದ ಯಲ್ಲಪ್ಪ ಹುಬ್ಬಳ್ಳಿ(50) ಕೊಲೆಯಾದವರು.
ಶಿವಾನಂದ ಅವರ ಪತ್ನಿ ಅನ್ನಪೂರ್ಣ ಹುಬ್ಬಳ್ಳಿ ಹಾಗೂ ಈಕೆಯ ಪ್ರಿಯಕರ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದ ಯಲ್ಲಪ್ಪ ಜೋಳಪ್ಪನವರ ಕೊಲೆ ಮಾಡಿರುವ ಆರೋಪಿಗಳು. ಈ ಕುರಿತು ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಘಟನೆ ವಿವರ: ಶಿವಾನಂದ 9 ಎಕರೆ ಜಮೀನು ಹೊಂದಿದ್ದು, ಕೃಷಿ ಕೆಲಸ ಮಾಡುತ್ತಿದ್ದರು. ಆದರೆ, ಇವರು ಕುಡಿತದ ಚಟ ಬೆಳೆಸಿಕೊಂಡಿದ್ದರು. ಇದರಿಂದ ಬೇಸತ್ತ ಪತ್ನಿ ಅನ್ನಪೂರ್ಣಾ ತವರು ಮನೆ ಸೇರಿದ್ದರು.
ಪ್ರಸಕ್ತ ವರ್ಷ ಮುಂಗಾರು ಆರಂಭದಲ್ಲಿ ಯಲ್ಲಪ್ಪ ಜೋಳಪ್ಪನವರ ಎಂಬಾತ ಶಿವಾನಂದ ಅವರ ಜಮೀನನ್ನು ಲಾವಣಿ ಮಾಡಿಕೊಂಡಿದ್ದ. ಯಲ್ಲಪ್ಪ ಮತ್ತು ಅನ್ನಪೂರ್ಣ ಅವರ ನಡುವೆ ಅನೈತಿಕ ಸಂಬಂಧ ಇದೆ ಎಂದು ಪತಿ ಶಿವಾನಂದನಿಗೆ ತಿಳಿದು ಬಂದಿದೆ. ಹೀಗಾಗಿ ಅನ್ನಪೂರ್ಣಾಳ ಸಹಕಾರದೊಂದಿಗೆ ಯಲ್ಪಪ್ಪ ಸೆ.29ರಂದು ಶಿವಾನಂದನನ್ನು ರಾಮನಕೊಪ್ಪ ಕ್ರಾಸ್ ಬಳಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.