ಹಾವೇರಿ: ಜಾನುವಾರು ವಧೆ, ಅಕ್ರಮ ಗೋ ಸಾಗಾಣಿಕೆ ತಡೆಯಲು ಸರ್ಕಾರ ಕ್ರಮ ಕೈಗೊಂಡಿದ್ದು, ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಅನುಷ್ಠಾನಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬಕ್ರೀದ್ ಹಬ್ಬದ ಪ್ರಯುಕ್ತ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಪ್ರಾಣಿದಯಾ ಸಂಘದ ಹಾಗೂ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಮತ್ತು ಸಂರಕ್ಷಣಾ ವಿಧೇಯಕ-2021ರ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅನಧಿಕೃತವಾಗಿ ಗೋವು, ಕರುಗಳು, ಒಂಟೆಗಳು ಹಾಗೂ ಇತರೆ ಜಾನುವಾರುಗಳ ಅಕ್ರಮ ಸಾಗಾಣಿಕೆ ಹಾಗೂ ವಧೆಯನ್ನು ಮಾಡುವ ಸಾಧ್ಯತೆಗಳಿವೆ. ಆದ್ದರಿಂದ ಅಧಿಕಾರಿಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸುವ ಮೂಲಕ ಅಕ್ರಮ ಜಾನುವಾರು ಸಾಗಾಣಿಕೆ ಹಾಗೂ ವಧೆಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.
ಜಿಲ್ಲಾ ಪಂಚಾಯ್ತಿ ಸಿಇಒ ಮೊಹಮ್ಮದ್ ರೋಶನ್ ಮಾತನಾಡಿ, ಪ್ರಾಯೋಗಿಕವಾಗಿ ರಾಣೆಬೆನ್ನೂರು ಹಾಗೂ ಹಾವೇರಿ ನಗರ ಸಭೆಗಳ ವತಿಯಿಂದ ಬೀದಿ ನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆ ಹಾಗೂ ರೇಬೀಸ್ ಲಸಿಕೆ ನೀಡಲು ಕ್ರಿಯಾ ಯೋಜನೆ ತಯಾರಿಸುವಂತೆ ಯೋಜನಾ ನಿರ್ದೇಶಕ ವಿರಕ್ತಮಠ ಅವರಿಗೆ ಸೂಚಿಸಿದರು.
ಜಿಲ್ಲಾ ಪ್ರಾಣಿದಯಾ ಸಂಘದ ಅಧಿಕಾರೇತರ ಸದಸ್ಯ ಶಾಂತಪ್ಪ ಅಟವಾಳಗಿ ಮಾತನಾಡಿ, ಬಿಡಾಡಿ ದನಗಳು ಹಾಗೂ ನಾಯಿಗಳಿಗೆ ಮುಂಜಾಗ್ರತಾ ಲಸಿಕೆ ಹಾಗೂ ಮೇವು, ನೀರು ನೀಡಲು ಮನವಿ ಮಾಡಿದರು.
ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ, ಜಿಲ್ಲೆಯಲ್ಲಿ 2781 ಬಿಡಾಡಿ ದನಗಳಿದ್ದು, ಅವುಗಳಿಗೆ ಆಯಾ ತಾಲ್ಲೂಕಿನ ಮಾರುಕಟ್ಟೆ ಸಮೀಪ ಒಂದೇ ಕಡೆಗೆ ಮೇವು ಮತ್ತು ನೀರು ಒದಗಿಸಲು ಸ್ವಯಂ ಸೇವಾ ಸಂಸ್ಥೆಗಳು, ಪ್ರಾಣಿ ಪ್ರಿಯರು ಮುಂದೆ ಬಂದಲ್ಲಿ ಸರ್ಕಾರದಿಂದ ಅನುದಾನ ಲಭ್ಯವಿದೆ. ಅದನ್ನು ಒದಗಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು.
ಹಾವೇರಿ ಜಿಲ್ಲಾ ಪ್ರಾಣಿದಯಾ ಸಂಘದ ಸರ್ಕಾರೇತರ ಸದಸ್ಯರಾದ ನಿಜಲಿಂಗಪ್ಪ ಬಸಗೇಣ್ಣಿ, ಪರಿಮಳ ಜೈನ್, ರವಿ ಹಿಂಚಗೇರಿ, ಚಂದ್ರಕಾಂತ, ಸಿ.ಬಿ. ಪಾಟೀಲ, ಪವನ್ ಎಸ್.ಟಿ, ಡಾ.ಸಂಜಯ, ವಿವಿಧ ಖಾಸಗಿ ಗೋಶಾಲೆಗಳ ಸದಸ್ಯರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.