ಹಾವೇರಿ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆ ವತಿಯಿಂದ ‘ಜಲಾಮೃತ ಜಲಾನಯನ ಯೋಜನೆ’ಯಡಿ ಜಿಲ್ಲೆಯಲ್ಲಿ 22,082 ಹೆಕ್ಟೇರ್ ಪ್ರದೇಶದಲ್ಲಿ ನೀರು ಮತ್ತು ಮಣ್ಣು ಸಂರಕ್ಷಣೆ ಚಟುವಟಿಕೆ ಮೂಲಕ ಜಲಸಂಪನ್ಮೂಲ ಕ್ರೋಡೀಕರಣ ಕಾರ್ಯ ಕೈಗೊಂಡಿದೆ.
ಜಲಾಮೃತ ಜಲಾನಯನ ಯೋಜನೆಯಡಿ ಪ್ರಮುಖವಾಗಿ ನೀರು ಮತ್ತು ಮಣ್ಣು ಸಂರಕ್ಷಣೆ ಕಾಮಗಾರಿಗಳಾದ ಮಣ್ಣಿನ ಬದು, ಕೃಷಿ ಹೊಂಡ, ನೀರು ಕಾಲುವೆ, ಕೊಳವೆಬಾವಿ ಪುನರುಜ್ಜೀವನ, ಕೃಷಿ ಅರಣ್ಯ, ತೋಟಗಾರಿಕೆ ಇತ್ಯಾದಿ ಕಾಮಗಾರಿಗಳನ್ನು ಕೈಗೊಂಡಿದೆ.
ಮೈದೂರು ಪ್ರದೇಶ ಆಯ್ಕೆ:ಇದೀಗ ರಾಣೇಬೆನ್ನೂರು ತಾಲ್ಲೂಕಿನಲ್ಲಿ 2,710 ಹೆಕ್ಟೇರ್ ಪ್ರದೇಶದ ಚಟುವಟಿಕೆ ನಡೆಯುತ್ತಿದೆ. ಈ ಭಾಗದ ಮೈದೂರು ಉಪಜಲಾನಯನ ಪ್ರದೇಶವನ್ನು ಆಯ್ಕೆ ಮಾಡಲಾಗಿದೆ. ಈ ವ್ಯಾಪ್ತಿಯಲ್ಲಿ ಚಿಕ್ಕ ಅರಳಿಹಳ್ಳಿ, ಬೇವಿನಹಳ್ಳಿ, ಗುಡಗೂರ, ಮೈದೂರು, ಕುದರಿಹಾಳ, ಹರನಗಿರಿ, ಯತ್ತಿನಹಳ್ಳಿ ಹೊನ್ನತ್ತಿ, ಕೆರಿಮಲ್ಲಾಪೂರ ಒಂಬತ್ತು ಗ್ರಾಮಗಳಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗಿದೆ. 153ಕ್ಕೂ ಹೆಚ್ಚು ಜನ ಕೂಲಿಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ ತಿಳಿಸಿದ್ದಾರೆ.
ಮೈದೂರ ಜಲಾನಯನ ಪ್ರದೇಶದಲ್ಲಿ 2,234 ಹೆಕ್ಟೇರ್ ಕಂದಕ ಬದು ನಿರ್ಮಾಣ ಕಾರ್ಯ, 518 ಕಲ್ಲಿನ ಕೋಡಿ, 30 ರಬ್ಬಲ್ ತಡೆ, 121 ಕೃಷಿ ಹೊಂಡ, 78 ಎರೆಹುಳ ತೊಟ್ಟಿ, 26 ಆರ್.ಆರ್.ಎಸ್, 17 ತಡೆ ಆಣೆಕಟ್ಟು, 489 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ, 1203 ಹೆ. ಪ್ರದೇಶದಲ್ಲಿ ಅರಣ್ಯೀಕರಣ, 50 ಹೆಕ್ಟೇರ್ ಪ್ರದೇಶದಲ್ಲಿ ಮೇವು ಅಭಿವೃದ್ಧಿ, 118 ಇಂಗು ಗುಂಡಿ, 18 ದನದ ಕೊಟ್ಟಿಗೆ, 18 ಕುರಿ ಕೊಟ್ಟಿಗೆ ಕಾಮಗಾರಿಗಳ ನಿರ್ಮಾಣದ ಉದ್ದೇಶ ಹೊಂದಲಾಗಿದೆ ಎಂದು ಹೇಳಿದ್ದಾರೆ.
300 ಕಾರ್ಮಿಕರಿಗೆ ಕೆಲಸ:125 ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಕಂದಕ, ಬದು ನಿರ್ಮಾಣ ಮಾಡಲಾಗಿದೆ. ನಿತ್ಯ ಈ ಉಪಜಲಾನಯನ ವ್ಯಾಪ್ತಿಯಲ್ಲಿ 250ರಿಂದ 300 ಜನ ಕಾರ್ಮಿಕರಿಗೆ ಕೆಲಸ ನೀಡಲಾಗಿದೆ. ಕೂಲಿಕಾರರಿಗೆ ಕೋವಿಡ್ ಸುರಕ್ಷತಾ ಕ್ರಮಗಳ ಕುರಿತು ಜಾಗೃತಿಯ ಜೊತೆಗೆ ಮುಖಗವಸು ಧರಿಸಿ ಅಂತರ ಕಾಯ್ದುಕೊಳ್ಳುವ ಮೂಲಕ ಕೆಲಸ ನಿರ್ವಹಿಸುತ್ತಿರುವುದು ವಿಶೇಷವಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಮಾಹಿತಿ:ಹಾವೇರಿ ತಾಲ್ಲೂಕಿನಲ್ಲಿ 4849.07 ಹೆಕ್ಟೇರ್ ಪ್ರದೇಶದಲ್ಲಿ ಜಲಾನಯನ ಚಟುವಟಿಕೆ ನಡೆಯುತ್ತಿದೆ. ದೇವಿಹೊಸೂರು ಉಪಜಲಾನಯನ ವ್ಯಾಪ್ತಿಯಲ್ಲಿ ಆಲದಕಟ್ಟಿ, ನಾಗನೂರು, ದೇವಿಹೊಸೂರು, ಹೊಸಳ್ಳಿ ಹಾಗೂ ವೆಂಕಟಾಪುರ ಗ್ರಾಮಗಳಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗಿದೆ.
ಸವಣೂರು ತಾಲ್ಲೂಕಿನಲ್ಲಿ 3020.27 ಹೆಕ್ಟೇರ್,ಶಿಗ್ಗಾವಿ ತಾಲ್ಲೂಕಿನಲ್ಲಿ 2900.35 ಹೆಕ್ಟೇರ್, ಬ್ಯಾಡಗಿ ತಾಲ್ಲೂಕಿನಲ್ಲಿ 2850.36 ಹೆಕ್ಟೇರ್,ಹಾನಗಲ್ ತಾಲ್ಲೂಕಿನಲ್ಲಿ 2765.36 ಹೆಕ್ಟೇರ್,ಹಿರೇಕೆರೂರು ತಾಲ್ಲೂಕಿನಲ್ಲಿ 2986.49 ಹೆಕ್ಟೇರ್ ಪ್ರದೇಶದಲ್ಲಿ ಚಟುವಟಿಕೆ ನಡೆಯುತ್ತಿದೆ.
ಸಾಧನೆ:ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ 7017 ಮಾನವ ದಿನಗಳನ್ನು ಸೃಜಿಸಿ, 226 ಕಾಮಗಾರಿ ಕೈಗೊಳ್ಳಲಾಗಿದ್ದು, 493 ಹೆಕ್ಟೇರ್ ಪ್ರದೇಶದಲ್ಲಿ ಕಂದಕ, ಬದು ನಿರ್ಮಾಣ ಕೈಗೊಳ್ಳಲಾಗಿದೆ ಹಾಗೂ 2393 ಕೂಲಿಕಾರರಿಗೆ ಕೆಲಸ ನೀಡಲಾಗಿದೆ. ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಮಂಜುನಾಥ ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.